Wednesday 24 June 2020

ಷೋಡಶ ಸಂಸ್ಕಾರ (೮) - ಅನ್ನಪ್ರಾಶನ

ಹುಟ್ಟಿದ ಆರು ಅಥವಾ ಎಂಟನೇ ತಿಂಗಳಿನಲ್ಲಿ ಮಗುವಿಗೆ ಅನ್ನಪ್ರಾಶನ ಮಾಡಿಸಬೇಕು. ಸಮಸಂಖ್ಯೆಯ ತಿಂಗಳು ಯುಕ್ತವೆನ್ನುತ್ತಾರೆ. ಕಶ್ಮಲವನ್ನು ತಿಂದಿದ್ದ ಮಗುವಿನ ಶುದ್ಧಿಗಾಗಿ, ಆಯುಷ್ಯಾಭಿವೃದ್ಧಿಗಾಗಿ, ಈ ಸಂಸ್ಕಾರವು ಮಹತ್ವದ್ದೆನಿಸಿದೆ. ೬ - ೮ - ೧೦ ತಿಂಗಳಲ್ಲಿ ಕಿವಿ ಚುಚ್ಚುವ ವಿಧಿಯಿಂದ ಮಗುವಿಗೆ ಉಂಟಾಗಬಹುದಾದ ಚರ್ಮರೋಗ ಪರಿಹಾರವೆಂದೂ, ಹಲ್ಲು ಹುಟ್ಟುವ ಮೊದಲೇ ನಡೆಸಬೇಕೆಂಬುದೂ ಗಮನಾರ್ಹ. ನಿಷ್ಕ್ರಮ - ಪ್ರಾಶನ ಈ ಎರಡು ಸಂಸ್ಕಾರಗಳನ್ನು ನಾಮಕರಣ ಸಂದರ್ಭದಲ್ಲೇ ಮಾಡುತ್ತಾರೆ. ಆದರೆ ಕುಲದಲ್ಲಿಯೇ ನಡೆಸಬೇಕಾದ ಸಂಸ್ಕಾರವನ್ನು ಮೊದಲು ಮಾಡುವುದು ಯುಕ್ತವಲ್ಲ.


ಶುಭದಿನದಂದು ಸ್ವಸ್ತಿವಾಚನ ಅಭ್ಯುದಯಿಕ ಶ್ರಾದ್ಧ ಮಾಡಿ, ಅನ್ನ, ಹಾಲು, ಮೊಸರು ಜೇನು ಇವುಗಳನ್ನು ದೇವರಿಗೆ ಸಮರ್ಪಿಸಿ ಆರತಿಯೊಂದಿಗೆ ಪೂಜಿಸಬೇಕು. ಬ್ರಾಹ್ಮಣರಿಗೆ ದಕ್ಷಿಣೆ ಕೊಟ್ಟು, ಮೊಸರು ಆರತಿಯೊಂದಿಗೆ ಪೂಜಿಸಬೇಕು. ಬ್ರಾಹ್ಮಣರಿಗೆ ದಕ್ಷಿಣೆ ಕೊಟ್ಟು ಮೊಸರು-ಜೇನು-ತುಪ್ಪ ಇವುಗಳನ್ನು ಮಿಶ್ರಣ ಮಾಡಿ ಅನ್ನವನ್ನು ಶುದ್ಧ ಪಾತ್ರೆಯಲ್ಲಿರಿಸಿ, ಪೂರ್ವಾಭಿಮುಖವಾಗಿ ಕುಳಿತ ತಾಯಿಯ ಮಡಿಲಲ್ಲಿರುವ ಶಿಶುವಿಗೆ ಒಂದು ಗ್ರಾಸವನ್ನು ಪ್ರಾಶನಮಾಡಿಸಿ ಯಥೇಷ್ಟವಾಗಿ ಉಣಿಸಿ ಮುಖ ಪ್ರಕ್ಷಾಲನೆ ಮಾಡಿಸುವುದು. ಇದೆ ಸಂದರ್ಭದಲ್ಲಿ ಮಗುವಿಗೆ "ಕರ್ಣವೇಧ" ಮಾಡಬಹುದು.


ಆರು, ಏಳು ಅಥವಾ ಎಂಟನೆಯ ತಿಂಗಳಿನಲ್ಲಿ ಕರ್ಣವೇಧವನ್ನು ಮಾಡಬೇಕು. ಇದರಿಂದ ಚರ್ಮರೋಗಾದಿಗಳು ತಡೆಗಟ್ಟುವವು ಮತ್ತು ಕಾಂತಿಯುಷ್ಠಿಯೂ ಅಭಿವೃದ್ಧಿಯಾಗುವುದು. ಹಲ್ಲು ಹುಟ್ಟುವುದಕ್ಕಿಂತ ಮೊದಲು  ಕಿವಿಚುಚ್ಚಬೇಕು. ಗಂಡುಮಗುವಿಗಾದರೆ ಮೊದಲು ಬಲಕಿವಿ ನಂತರ ಎಡಕಿವಿಗೆ ಚುಚ್ಚಿದರೆ, ಹೆಣ್ಣು ಮಗುವಿಗೆ ಮೊದಲು ಎಡಕಿವಿ ನಂತರ ಬಲಕಿವಿಗೆ ಚುಚ್ಚಬೇಕೆನ್ನುವುದು ಸ್ಮೃತಿ. ಶುಭದಿನದಂದು ಮಧ್ಯಾಹ್ನದೊಳಗೆ ವಿಷ್ಣು, ಬ್ರಹ್ಮ, ಶಿವ, ಸೂರ್ಯ, ಚಂದ್ರ, ದಿಕ್ಪಾಲಕರು, ಅಶ್ವಿನೀದೇವತೆಗಳು, ಸರಸ್ವತಿ, ದೇವತೆಗಳನ್ನು ಪ್ರಾರ್ಥಿಸಿ, ಕರ್ಣವೇಧವನ್ನು ಮಾಡಬೇಕು. ಶುಕ್ಲಪಕ್ಷ ಹಾಗೂ ಶುಭವಾರಗಳು ಈ ಸಂಸ್ಕಾರಕ್ಕೆ ಸೂಕ್ತ. ಜನ್ಮಮಾಸ ಸರ್ವಥಾ ನಿಷಿದ್ಧ.



(ಷೋಡಶ ಸಂಸ್ಕಾರ (೯) - ಚೌಲಕರ್ಮ --> ಮುಂದೆ ಓದಿ )


Friday 19 June 2020

ಷೋಡಶ ಸಂಸ್ಕಾರ (೭) - ಉಪನಿಷ್ಕ್ರಮಣ

ಮೂರು ಅಥವಾ ನಾಲ್ಕನೇ ತಿಂಗಳಿನಲ್ಲಿ ಶುಭತಾರಾನುಕೂಲದಂದು  ಉಪನಿಷ್ಕ್ರಮಣ ನಡೆಸಬೇಕು. ಮಗುವು ಮೊದಲ ಬಾರಿಗೆ ಮನೆಯಿಂದ ಹೊರ ಬಂದು ಸೂರ್ಯ, ಅಗ್ನಿ, ಗೋವು, ದಿಕ್ಪಾಲಕರ ಪ್ರಾರ್ಥನೆ, ದರ್ಶನ ನಡೆಸಿದಲ್ಲಿ ಮಗುವಿಗೆ ಮಾನಸಿಕ, ಶಾರೀರಿಕ ಶಕ್ತಿಗಳೂ  ಆಯುಷ್ಯವೂ ವೃದ್ಧಿಸುತ್ತದೆ. ರಾತ್ರಿ ಚಂದ್ರದರ್ಶನ ಔಷಧೀದೇವತೆಗಳ ಪ್ರಾರ್ಥನೆಯೂ ಯುಕ್ತವಾಗಿದೆ.



ಶುಭದಿನದಂದು ಸ್ನಾನಮಾಡಿಸಿ ಶಿಶುವನ್ನು ವಸ್ತ್ರಾದಿಗಳಿಂದ ಅಲಂಕರಿಸಿ ಅಂಗಳದಲ್ಲಿ ಸ್ವಸ್ತಿಕೆಯನ್ನಿಟ್ಟು ಸವಿತೃದೇವತೆಯನ್ನು ಆವಾಹಿಸಿ ನೈವೇದ್ಯ ಸಮರ್ಪಣೆ ಮಾಡಿ ಪೂಜಿಸಿ, ಮಗು ಸಹಿತ ಮೂರು ಪ್ರದಕ್ಷಿಣೆ ಬಂದು , ನಂತರ ಸಮೀಪದ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ, ದೇವತಾನುಗ್ರಹಕ್ಕೆ ಪ್ರಾರ್ಥಿಸಿ, ಮನೆಗೆ ಬಂದು, ಸ್ವಸ್ತಿಕೆಯಲ್ಲಿ ಆವಾಹಿಸಿದ ಸವಿತೃ ದೇವತೆಯನ್ನು ಉದ್ವಾಸನೆ ಮಾಡಬೇಕು. ನಾಲ್ಕನೇ ಮಾಸದಲ್ಲಿ ಶುಕ್ಲಪಕ್ಷ ತಿಥಿಯಂದು ರಾತ್ರಿ ಚಂದ್ರನ ದರ್ಶನ ಮಾಡಿಸಿ ಔಷಧೀದೇವತೆಗಳನ್ನು ಪ್ರಾರ್ಥಿಸಬೇಕು.


(ಷೋಡಶ ಸಂಸ್ಕಾರ (೮) - ಅನ್ನಪ್ರಾಶನ --> ಮುಂದೆ ಓದಿ)

ಷೋಡಶ ಸಂಸ್ಕಾರ (೬) - ನಾಮಕರಣ

ನಾಮಕರಣ ಸಂಸ್ಕಾರದಿಂದ ವ್ಯಾವಹಾರ ಸಿದ್ಧಿ ಆಗುತ್ತದೆ. ಲೌಕಿಕ ಪ್ರತಿಷ್ಠೆಯೂ ಉಂಟಾಗುವುದು. ಮಗುವಿನ ಜನ್ಮಕಾಲದ ಲಗ್ನ, ನಕ್ಷತ್ರ, ತಿಥಿಗಳು ದೋಷಯುಕ್ತವೆಂದು ತಿಳಿದರೆ ಸೂಕ್ತ ಶಾಂತಿ ನಡೆಸಿ ನಂತರ ಸಂಸ್ಕಾರಗಳನ್ನು ನಡೆಸುವುದು ವಿಹಿತ.


 ಹರಿವಾಣದಲ್ಲಿ ಅಕ್ಕಿಯನ್ನು ಹರಡಿ ಸುವರ್ಣದಲ್ಲಿ ಅಥವಾ ಹಳದಿಬೇರಿನಿಂದ  ಮೊದಲು ಕುಲದೇವತೆಯ ಹೆಸರು ನಂತರ ಮಾಸನಾಮ, ನಕ್ಷತ್ರನಾಮ, ದೇವತೆಗಳ ಹೆಸರು, ನಾಲ್ಕನೆಯದಾಗಿ ವ್ಯವಹಾರಯೋಗ್ಯವಾದ ಹೆಸರನ್ನು ಬರೆದು ಪ್ರತಿಷ್ಠಾಮಂತ್ರ ಜಪಿಸಿ, ಷೋಡಶೋಪಚಾರ ಪೂಜೆ ಮಾಡಬೇಕು. ನಾಮಕರಣ ಲಗ್ನ ಶುಭವಾಗಲು ಬ್ರಾಹ್ಮಣರಿಗೆ ತಾಂಬೂಲ ದಕ್ಷಿಣೆ ಕೊಟ್ಟು ಬರೆದ ದೇವತೆಗಳ  ಹೆಸರಿನೊಂದಿಗೆ ಭಕ್ತನಾಗಿರುವಿ ಎಂದು ಶಿಶುವಿನ ಬಲಕಿವಿಯಲ್ಲಿ  ಮೂರು ಸಲ ಹೇಳಬೇಕು. ನಂತರ  ಬ್ರಾಹ್ಮಣರಿಂದ ಆಶೀರ್ವಚನ ಪಡೆಯಬೇಕು.


ಶಿಶುವಿನ ಜನನಕಾಲದಲ್ಲಿ ಲಗ್ನಾದಿ  ದೋಷಗಳಿದ್ದರೆ, ತಕ್ಕ ಶಾಂತಿಯನ್ನು ಮಾಡಿ ಬಳಿಕ ಜಾತಕರ್ಮ- ನಾಮಕರಣ ಸಂಸ್ಕಾರಗಳನ್ನು ಆಚರಿಸಬೇಕು.

(ಷೋಡಶ ಸಂಸ್ಕಾರ (೭) - ಉಪನಿಷ್ಕ್ರಮಣ --> ಮುಂದೆ ಓದಿ)

Thursday 18 June 2020

ಷೋಡಶ ಸಂಸ್ಕಾರ (೫) - ಜಾತಕರ್ಮ

ಷೋಡಶ ಸಂಸ್ಕಾರದ ಐದನೇ ಕರ್ಮವೇ - "ಜಾತಕರ್ಮ".  ಮಗು ಹುಟ್ಟಿದ ತಕ್ಷಣ, ಅದರ ಹೊಕ್ಕುಳಬಲ್ಲು ಕತ್ತರಿಸುವ ಮುನ್ನ, ಅಥವಾ ಜಾತಾಶೌಚ ಮುಗಿದ ಕೂಡಲೇ ಜಾತಕರ್ಮ ಸಂಸ್ಕಾರವು ಆಗಬೇಕು.  ಅನಂತರದ ದಿನಗಳಲ್ಲಾದರೆ ಶುಭಮುಹೂರ್ತಕಾಲಗಳಲ್ಲಿ ನಡೆಸಬೇಕು. ಮಗುವಿನ ಮೊದಲ ಸಂಸ್ಕಾರವಾದ ಇದು ಮಾತೃಗರ್ಭದ ನೀರಿನ ಸೇವನೆಯಿಂದ ಉಂಟಾದ ದೋಷ ಇವಾರಣೆಗೆಂದು ಹೇಳಿದೆ. ಇದರಿಂದ ಮೇಧಾಶಕ್ತಿ, ಆಯುಷ್ಯ, ತೇಜಸ್ಸು ಅಭಿವೃದ್ಧಿಯಾಗುವುದು.

ಈ ಸಂಸ್ಕಾರವನ್ನು ಮಗು ಹುಟ್ಟಿದಾಕ್ಷಣ ಮಾಡಬೇಕೆಂದಿದ್ದರೂ ಇಂದಿನ ಲೋಕಾಚಾರ ಪ್ರಕಾರ ಹನ್ನೊಂದನೇ ಅಥವಾ ಹನ್ನೆರೆಡನೆ ದಿನ (ಅಥವಾ ನಾಮಕರಣದ ಜೊತೆಗೆ) ಆಚರಿಸುವುದು ಬಳಕೆಯಾಗಿದೆ. ಆ ದಿನ ಪಂಚಗವ್ಯಪ್ರಾಶನ. ಉಪವೀತಧಾರಣೆ, ಮಾಡಿಕೊಂಡು ಪುಣ್ಯಾಹವಾಚನ, ಅಭ್ಯುದಯಿಕ ಶ್ರಾದ್ಧಾದಿಗಳನ್ನು ಮುಗಿಸಿ ಪತ್ನಿಯು ತಾತ್ಕಾಲಿಕ ಮೈಶುದ್ಧಿಗಾಗಿ ಕಲಶಗ್ರಹಣವಿಧಿ ನಡೆಸಬೇಕು. ನಂತರ ಸ್ವಚ್ಛವಾದ ಶಿಲಾತಲದಲ್ಲಿ ಸಮಪ್ರಮಾಣ ಆಗದಂತೆ ಜೇನು, ತುಪ್ಪ (ಬೆಣ್ಣೆ) ಬೆರೆಸಿ ಬಜೆ ಬೇರನ್ನು ಜೊತೆಯಾಗಿ ತೇದು ಅದರೊಂದಿಗೆ ಸುವರ್ಣವನ್ನು ತಿಕ್ಕಿ, ಚಿನ್ನದಿಂದಲೇ ಶಿಶುವಿಗೆ ಪ್ರಾಶನ ಮಾಡಬೇಕು. ಆ ಚಿನ್ನವನ್ನು ತೊಳೆದು ಶಿಶುವಿನ ಬಲ, ಎಡ ಕಿವಿಗಳಿಗೆ ಸ್ಪರ್ಶಮಾಡಬೇಕು. ಶಿಶುವಿನ ಎರಡುಭುಜಗಳನ್ನು ಸ್ಪರ್ಶಿಸಿ, ಸೊಂಟಕ್ಕೆ ಎಕ್ಕೆಗಿಡದ ಸೂತ್ರವನ್ನು ನೂಲಿನಂತೆ ಕಟ್ಟಬೇಕು. ಶಿಶುವಿನ ನೆತ್ತಿಯನ್ನು ಆಘ್ರಾಣಿಸಬೇಕು. ತಾಯಿಯು ಶಿಶುವಿಗೆ ಸ್ತನ್ಯಪಾನ ಮಾಡಿಸಬೇಕು.

ಹೆಣ್ಣು ಮಗುವಿಗಾದರೆ ಮೇಲೆ ತಿಳಿಸಿದ ಎಲ್ಲ ವಿಧಗಳನ್ನು ಆಮಂತ್ರಕವಾಗಿ ನಡೆಸಬೇಕೆಂದು ಋಷಿಗಳು ಹೇಳಿರುವರು.

(ಷೋಡಶ ಸಂಸ್ಕಾರ (೬) -  ನಾಮಕರಣ --> ಮುಂದೆ ಓದಿ)

Tuesday 16 June 2020

ಷೋಡಶ ಸಂಸ್ಕಾರ (೪) - ವಿಷ್ಣುಬಲಿ

ಷೋಡಶ ಸಂಸ್ಕಾರಗಳಲ್ಲಿ ಒಂದಾದ ವಿಷ್ಣುಬಲಿಯು ಗರ್ಭಿಣಿ ಸ್ತ್ರೀಯ ಎಂಟನೆಯ ತಿಂಗಳಿನಲ್ಲಿ ನಡೆಸಬೇಕಾದ ಸಂಸ್ಕಾರ. ಇದರಿಂದ ಗರ್ಭದ ತೊಂದರೆಗಳು ನಿವಾರಣೆಯಾಗಿ, ಮಹಾಪಾಪಗಳು ನಾಶವಾಗಿ, ಸುಖಪ್ರಸವಾದಿಗಳಿಗೆ ವಿಷ್ಣುವಿನ ಅನುಗ್ರಹ ದೊರೆಯುವುದೆಂಬುದು ನಂಬಿಕೆ.


ಈಶಾನ್ಯ ಭಾಗದಲ್ಲಿ ಕಲಶವನ್ನು ಸ್ಥಾಪಿಸಿ, ವಿಷ್ಣುವನ್ನು ಆವಾಹನೆ ಮಾಡಿ, ಕಜ್ಜಾಯ, ಚಕ್ಕುಲಿ, ಅಪೂಪಾಡಿಗಳನ್ನು ನೈವೇದ್ಯ ಮಾಡಬೇಕು. ಕಲಶದ ಪಶ್ಚಿಮದಲ್ಲಿ ಚತುರಪರಮಂಡಲ ಮಾಡಿ ಪೂರ್ವ ಪಶ್ಚಿಮ ದಕ್ಷಿಣೋತ್ತರವಾಗಿ ೯x ೯ ರೇಖೆಗಳನ್ನು ರಂಗವಲ್ಲಿಯಿಂದ ಬರೆದು ೬೪ ಕೋಣೆಗಳ ಮಂಡಲವನ್ನು ಸಿದ್ಧಗೊಳಿಸಿ ನೈಋತ್ಯ ಕೋಣೆಯಿಂದ ಪ್ರದಕ್ಷಿಣೆಯಾಗಿ ಹೊರಗಿನ ಸುತ್ತಿನಲ್ಲೂ ಅಂತೆಯೇ ಒಳಗಿನ ವೃತ್ತದಲ್ಲೂ ಅರಳಿನಿಂದ ಬಲಿ ಕೊಟ್ಟು, ನಂತರ ಉತ್ತರಪೂಜಾಪೂರ್ವಕ ಕರ್ಮಮುಕ್ತಾಯಗೊಳಿಸಿ, ಕಲಶೋದಕದಿಂದ ಮಾರ್ಜನ ಮಾಡಿಸಿಕೊಳ್ಳಬೇಕು.


ಇಂದಿನ ದಿನಗಳಲ್ಲಿ ವಿಷ್ಣುಬಲಿ  ಸಂಸ್ಕಾರವು ಪುಂಸವನ- ಅನವಲೋಭನ, ಸೀಮಂತ ಸಂಸ್ಕಾರಗಳೊಂದಿಗೆ ಜೊತೆಯಾಗಿ ಸೀಮಂತದ ದಿನದಂದು ಆಚರಿಸಲಾಗುತ್ತಿದೆ.


(ಷೋಡಶ ಸಂಸ್ಕಾರ (೫) -  ಜಾತಕರ್ಮ ---> ಮುಂದೆ ಓದಿ)

Monday 15 June 2020

ಷೋಡಶ ಸಂಸ್ಕಾರ (೩) - ಸೀಮಂತ

ಆರು ಅಥವಾ ಎಂಟನೇ ತಿಂಗಳಿನ ಗರ್ಭವತಿಗೆ ಈ ಸೀಮಂತ ವಿಧಿಯನ್ನು ಮಾಡಬೇಕು. ಸೀಮಂತಿನಿಯ ಮೊದಲ ಗರ್ಭವನ್ನು ತಿನ್ನಲು ಕೆಲವು ದುಷ್ಟ ಸ್ತ್ರೀಶಕ್ತಿಗಳೂ, ಮಾಯಾವಿಗಳೂ, ರಕ್ತ ಪಿಪಾಸುಗಳೂ ಹಾತೊರೆಯುವರು. ಅವರ ನಿರಾಸನಕ್ಕಾಗಿ ಪತಿಯು ಲಕ್ಷ್ಮೀದೇವಿಯನ್ನು ಮಂತ್ರದಿಂದ ಕರೆದಿರಬೇಕು. ಲಕ್ಷ್ಮೀದೇವಿಯು ವಿಶೇಷ ಸನ್ನಿಧಾನದಿಂದ ಮೋಹಿತರಾಗುವ ರಕ್ತ ಪಿಪಾಸುಗಳು ಹಾಗೂ ಮಾಯಾವಿಗಳು ಗರ್ಭವನ್ನು ಬಿಟ್ಟು ಹೋಗುವರೆಂಬ ನಂಬಿಕೆಯಿದೆ. ಮೊದಲ ಗರ್ಭಕ್ಕೆ ನಡೆಸಿದ ಸೀಮಂತ ಸಂಸ್ಕಾರ ಎಲ್ಲಾ ಗರ್ಭಕ್ಕೂ ಅನ್ವಯವಾಗುತ್ತದೆ. ಸೀಮಂತ ಸಂಸ್ಕಾರ ನಡೆಸದೇ  ಇದ್ದರೆ  ಹಾಗೂ ಹಾಗಿರುವಾಗಲೇ ಪ್ರಸವಿಸಿದರೆ, ಮಗುವನ್ನು ಮಡಿಲಲ್ಲಿಟ್ಟು ಮುಚ್ಚಿ ಸಂಸ್ಕಾರ ನಡೆಸಬೇಕೆಂದು ಸ್ಮೃತಿಯಲ್ಲಿ ಹೇಳಲ್ಪಟ್ಟಿದೆ.
ಮೊದಲಿಗೆ ಪ್ರಧಾನಜ್ಯಾಹುತಿ ಕೊಡಬೇಕು. ಸೀಮಂತೋನ್ನಯನ ಲಗ್ನ ಸುಲಗ್ನತಾ ಸಿದ್ಧಿಗೋಸ್ಕರ ಬ್ರಾಹ್ಮಣರಿಗೆ ತಾಂಬೂಲಫಲ ನೀಡಬೇಕು. ಗರ್ಭಿಣಿಯರೂ ಕೂಡಾ ಮುತ್ತೈದೆಯರಿಗೆ ಫಲದಾನ ನೀಡಬೇಕು. ಬ್ರಾಹ್ಮಣರು ಮಂಗಳಾಷ್ಟಕವನ್ನು ಪಠಿಸುತ್ತಿರಲು ಶುಭಮುಹೂರ್ತದಲ್ಲಿ ಪತಿಯು ಕಾಯಿಗಳೆರಡರಿಂದ ಕೂಡಿದ ಅತ್ತಿಗುಚ್ಛ, ಮೂರು ಬಿಳಿಬಣ್ಣವುಳ್ಳ ಶಲಲೀ, ಮೂರು ಎಸಳು ಪ್ರಾದೇಶಮಾತ್ರದ ಅಗ್ರಧರ್ಭೆಗಳನ್ನು ಜೊತೆಯಾಗಿ ಪತ್ನಿಯು ಪಶ್ಚಿಮ ಯಾ ಉತ್ತರಮುಖವಾಗಿ ದಕ್ಷಿಣದಲ್ಲಿ ನಿಂತುಕೊಂಡು ವ್ಯಾಹೃತಿ ಮಂತ್ರದಿಂದ ಆಕೆಯ ತಲೆಗೂದಲು- ಲಲಾಟ ಇವುಗಳ ಸಂಧಿಯ ಮಧ್ಯಭಾಗ ಬೈತಲೆಯಿಂದ ಮೇಲಕ್ಕೆ ಮೂರು ನಾಲ್ಕು ಸಲ ಗುರುತಿಸಬೇಕು.

ದೇಶಾಚಾರದಂತೆ ಉನ್ನಯನ ಕ್ರಮ ಹೀಗಿದೆ: ಇಡೀ ಅಡಿಕೆ ಎರಡನ್ನು ಹಂದಿಕಣೆಯೊಂದಿಗೆ ಸಂಯೋಜನ ಮಾಡಿ, ಚಿಕ್ಕ ಅತ್ತಿಗೊಂಚಲು ಶೃಂಗಾರ ಹೂ, ಇತರ ಐದು- ಏಳು  ಸಾತ್ವಿಕವಾದ ಸುವಾಸನೆಯುಳ್ಳ ಹೂಗಳನ್ನು ಪೋಣಿಸಿ, ಅದನ್ನು ಶುದ್ಧಗೊಳಿಸಿ ಲಕ್ಷ್ಮಿಯನ್ನು ಆವಾಹಿಸಿ ಶ್ರೀಸೂಕ್ತದಿಂದ ಪೂಜಿಸಿ ಸುಮುಹೂರ್ತಕಾಲದಲ್ಲಿ ಲಕ್ಷ್ಮಿಸನ್ನಿಧಾನದ ಆ ಹೂವಿನ ಮುಕುಟವನ್ನು ಪತಿಯು ಧರ್ಭಅಂಕುರತ್ರಯಗಳಿಂದ ಉನ್ನಯನ ಮಾಡಿ ಸುವಾಸಿನಿಯರ ಸಹಾಯದೊಂದಿಗೆ ಪತ್ನಿಯ ನಡುನೆತ್ತಿಯಲ್ಲಿ ಕಟ್ಟಬೇಕು. ನಂತರ ಆಕೆಯ ಮಡಿಲಿಗೆ ೫ ವಿಧದ ಸಾತ್ವಿಕ ಹಣ್ಣುಗಳನ್ನು ಹಾಕಿ ಅಕ್ಕಿ ಹಾಕಿ ಉಡಿತುಂಬಬೇಕು. ಇವಿಷ್ಟು ಆಚಾರ ವಿಶೇಷ. ಆ ಸಮಯದಲ್ಲಿ ವೀಣಾವಾದನ ಸಹಿತವಾಗಿ ಬ್ರಾಹ್ಮಣರಿಂದ ಸಾಮಗಾನ ಮಾಡಿಸಬೇಕು. ಅಥವಾ ತಟಸಂಬಂಧ ಮಂತ್ರವನ್ನಾದರೂ ಮೂರು ಸಲ ಹೇಳಿಸುವುದು ವಿಶೇಷ. ನಂತರ ಹೋಮಶೇಷವನ್ನು ಮುಕ್ತಾಯಗೊಳಿಸಿ ಪತಿಪುತ್ರವತಿಯರಾದ ಸ್ತ್ರೀಯರು ದಂಪತಿಗಳಿಗೆ ನೀರಾಜನ ಮಾಡಿಸಬೇಕು. ಪತ್ನಿಯು ತಲೆಯಲ್ಲಿಟ್ಟ ಹೂಕಿರೀಟವನ್ನು ತೆಗೆದು, ಅಡಿಕೆಯನ್ನು ಪತ್ನಿಯ ಕೈಯಲ್ಲಿ ಕೊಟ್ಟು, ಹಂದಿಕಣೆಯನ್ನು ದೂರ ಬಿಸಾಡಿ, ಹೂಗಳನ್ನು ಕ್ಷೀರವೃಕ್ಷಕ್ಕೆ ಕಟ್ಟಬೇಕು. ಅಡಿಕೆಗಳನ್ನೂ ಆಕೆ ಶುದ್ಧಮಣ್ಣಿನಲ್ಲಿ ನೆಡಬೇಕು.

ಹೂ ಕಿರೀಟದ ವಿಶೇಷತೆ: ಈ ಹೂ ಕಿರೀಟವನ್ನು ಬೇರ್ಪಡಿಸುವ ಮೊದಲು ಮಕ್ಕಳಾಗದವರಿದ್ದಾರೆ, ಅವರು ಬಸುರಿಯ ಪ್ರಾಯಕ್ಕಿಂತ ಚಿಕ್ಕವಾಗಿದ್ದಲ್ಲಿ ಅವರ ತಲೆಗೆ ಇಟ್ಟರೆ ಹಾಗೂ ಅವರು ಬಸುರಿಯ ಪ್ರಾಯಕ್ಕಿಂತ ದೊಡ್ಡವರಾಗಿದ್ದಲ್ಲಿ ಮೊದಲಿಗೆ ಅವರ ಪಾದಕ್ಕೆ ಇತ್ತು ನಂತರ ಅವರ ತಲೆಯಲ್ಲಿಟ್ಟರೆ, ಆ ಸ್ತ್ರೀಯರಿಗೆ ಮಕ್ಕಳಾಗುವ ಸಂಭವವಿರುತ್ತದೆ.

ಈ ಆಚರಣೆಯನ್ನು ಬಂಜೆಯರಿಗೆ ಮೂಲಿಗೆಯಂತೆ ಬಳಸಲಾಗುತ್ತದೆ.

(ಷೋಡಶ ಸಂಸ್ಕಾರ (೪) - ವಿಷ್ಣುಬಲಿ ---> ಮುಂದೆ ಓದಿ)

ಷೋಡಶ ಸಂಸ್ಕಾರ (೨) - ಪುಂಸವನ

ಪತ್ನಿಯು ಗರ್ಭಧರಿಸಿದ ಮೂರನೆಯ ತಿಂಗಳಿನಲ್ಲಿ ಪುಂಸವನ - ಅನವಲೋಭನ ಸಂಸ್ಕಾರ ನಡೆಸಬೇಕು. ಆದರೆ ಇಂದು ಈ ಸಂಸ್ಕಾರವನ್ನು ಸೀಮಂತದ ದಿನವೇ ನಡೆಸುತ್ತಾರೆ. ಪುಂಸವನ, ಅನವಲೋಭನ, ಸೀಮಂತ ಹಾಗೂ ವಿಷ್ಣುಬಲಿ  ಎಂಬ ಸಂಸ್ಕಾರಗಳನ್ನು ತಂತ್ರದ ಮೂಲಕ ನಡೆಸುವಲ್ಲಿ ಪುಣ್ಯಾಹವಾಚನ ಮಾಡಿ ನಾಂದೀಶ್ರಾದ್ಧ ಸಂದರ್ಭದಲ್ಲಿ "ಕ್ರತುದಕ್ಷರು" ಎಂಬ ವಿಶ್ವದೇವತೆ ಪುರಸ್ಸರ ಶ್ರಾದ್ಧ ಮಾಡಿ. "ಮಂಗಲ" ಎಂಬ ಅಗ್ನಿಯನ್ನು ಪ್ರತಿಷ್ಠಾಪಿಸಿ, ಅನ್ವಾಧಾನ ಮಾಡುವುದು. ಪ್ರಜಾಪತಿಗೆ ಒಂದು ಚರು ಆಹುತಿ ಹಾಗೂ ಧಾತೃದೇವತೆಗೆ ಎರಡು ಆಹುತಿ, ರಾಕಾದೇವತೆಗೆ ಎರಡು, ವಿಷ್ಣುವಿಗೆ ಮೂರು, ಪ್ರಜಾಪತಿಗೆ ಒಂದು ಅಜ್ಯಾಹುತಿಗಳೆಂದೂ, ಮಧ್ಯೆ ಧಧಿಪ್ರಾಶನ, ರಸನೇಚನ, ಸೀಮಂತೋನ್ನಯನಾದಿ ಗ್ರಹ್ಯೋಕ್ತವಿಧಿಗಳು ಗಮನಾರ್ಹ. 


ನಿರ್ವಾಪ ಮಾಡಿ ಚರು ಸಿದ್ಧಗೊಳಿಸಿ ಪತಿಯು ಪತ್ನಿಗೆ ಬಲಕೈಯನ್ನು ಶುದ್ಧಗೊಳಿಸಿ, ತುಂಬ ಮೊಸರು ಹಾಕಿ ಮಧ್ಯದಲ್ಲಿ ದೃಢವಾದ ಅಕ್ಕಿಯೊಂದನ್ನು ಪಾರ್ಶ್ವಗಳಲ್ಲಿ ಪುಷ್ಟವಾದ ಎರಡು ಉದ್ದಿನ ಕಾಳುಗಳನ್ನೂ ಇಟ್ಟು ಪ್ರಾಶನ ಮಾಡಿಸಬೇಕು. ಹೀಗೆ ಮೂರು ಸಾರಿ ಮಾಡಿ ಪ್ರತಿಸಲವೂ ಆಚಮನ ಮಾಡಿಸಬೇಕು. ಆನಂತರ ಒಬ್ಬ ಕನ್ನಿಕೆ ಅಥವಾ ವಧುವಿನಿಂದಲೇ ಗರಿಕೆಯನ್ನು ರಸ ಬರುವಂತೆ ಜಜ್ಜಿ ಹಿಂಡಿಸಿ, ಶುದ್ಧ ವಸ್ತ್ರದ ಅಂಚಿನಿಂದ ಪ್ರಜಾವದಾಖ್ಯ, ಜೀವ ಪುತ್ರಾಖ್ಯ ಸೂಕ್ತಗಳೆರೆಡನ್ನೂ ಜಪಿಸಿ, ಪತಿಯು ಪತ್ನಿಯ ಹಿಂಬದಿಯಲ್ಲಿ ನಿಂತು, ಎಡಕೈಯಿಂದ ಆಕೆಯ ಮುಖವನ್ನು ಹಿಂದಕ್ಕೆ ಮಾಡಿ ಬಲಮೂಗಿನಿಂದ ದೂರ್ವಾರಸವನ್ನು ಸಿಂಚನ ಮಾಡಬೇಕು. ನಂತರ, ಪತ್ನಿಯು ಆಚಮನ ಮಾಡಬೇಕು. ಅವಧಾನಧರ್ಮದಿಂದ ಚರುಹೋಮ  ಮಾಡಿ ಪತ್ನಿಯ ಹೃದಯವನ್ನು ಮುಟ್ಟಬೇಕು.


ಈ ಸಂಸ್ಕಾರದಿಂದಾಗುವ ಪ್ರಯೋಜನಗಳು ಹಲವಾರು. ಮೂರನೆಯ ತಿಂಗಳಿನಲ್ಲಿಯೇ ಮಾಡಬೇಕೆಂದು ಸ್ಮೃತಿ ತಿಳಿಸುತ್ತದೆ. ಏಕೆಂದರೆ, ಗರ್ಭಕೋಶದಲ್ಲಿ ದ್ರವರೂಪದಲ್ಲಿದ್ದ ಶುಕ್ಲ-ಶೋಣಿತಶಕ್ತಿಯು  ಘನರೂಪ ತಾಳುವ ಈ ತಿಂಗಳಿನಲ್ಲಿ ಇಂದ್ರಿಯೋತ್ಪತ್ತಿಯಾಗುವುದೆಂದೂ, ಈ ಸಂಸ್ಕಾರದಲ್ಲಿ ಹೇಳುವ ಮಂತ್ರಗಳು ಹಾಗೂ ಪ್ರಜಾವಾದಾಖ್ಯ- ಜೀವಪುತ್ರಾಖ್ಯ ಮಂತ್ರಗಳಿಂದ ದೂರ್ವಾರಸಸೇಚನದಿಂದ ಎರಡು ಹೃದಯವುಳ್ಳ ಗರ್ಭಿಣಿ ಸ್ತ್ರೀಯರಿಗೆ ಉಂಟಾಗಬಹುದಾದ ಬಯಕೆಗಳು ಅತಿಯಾಗದೆ, ಶಿಶುವಿನ ಪೂರ್ಣ ಬೆಳವಣಿಗೆಗೆ ದೈವಿಕಶಕ್ತಿಯುಂಟಾಗುವುದೆಂದು ಸಾರುತ್ತಿದೆ. ಈ ಸಂಸ್ಕಾರವನ್ನು ಪ್ರತಿ ಗರ್ಭಧಾರಣೆ ಸಮಯದಲ್ಲೂ ನಡೆಸಬೇಕೆಂದೂ, ಸೀಮಂತದ ಜೊತೆಗೆ ಪ್ರಥಮ ಗರ್ಭವತಿಗೆ ನಡೆಸಿದಲ್ಲಿ ಪ್ರತಿ ಗರ್ಭದಲ್ಲೂ ಆಚರಿಸಬೇಕಾಗಿಲ್ಲವೆಂದೂ ಬೇರೆ ಬೇರೆ ಅಭಿಪ್ರಾಯಗಳಿವೆ.

(ಷೋಡಶ ಸಂಸ್ಕಾರ (೩) - ಸೀಮಂತ ---> ಮುಂದೆ ಓದಿ)

Tuesday 9 June 2020

ಷೋಡಶ ಸಂಸ್ಕಾರ (೧) - ಗರ್ಭಾಧಾನ

ನೂತನ ದಂಪತಿಗಳು ಪ್ರಥಮರಾತ್ರಿ ನಡೆಸುವ ಸಮಾಗಮವನ್ನು "ನಿಷೇಕ" ಎನ್ನುತ್ತಾರೆ. ವಿವಾಹವಾದ ನಂತರ ಪತ್ನಿಯು ರಜಸ್ವಲೆಯಾಗಿ ಶುದ್ಧಿಗೊಂಡಾಗ ಪರ್ವದಿನ ದುಷ್ಟನಕ್ಷತ್ರ- ತಿಥಿಗಳನ್ನು ಹೊರತುಪಡಿಸಿ, ಶುಭ ತಾರಾನುಕೂಲ - ಲಗ್ನಶುದ್ಧ ದಿನ ಋತುದಾನ ನಡೆಸಿದರೆ ಸತ್ಸಂತತಿ  ಫಲಪ್ರಾಪ್ತಿಯಾಗುವುದು. ಮೊದಲ ೧೬ ದಿನಗಳನ್ನು ಮಾತ್ರ "ಋತುಕಾಲ" ಎನ್ನುತ್ತಾರೆ. ಮೊದಲ ೪ ದಿನಗಳನ್ನು ಬಿಟ್ಟು ಶುದ್ಧವಾದ ನಂತರದ ೧೨ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಒಳ್ಳೆಯ ದಿನದಂದು ನಡೆಸಬೇಕು. ಗರ್ಭಾಧಾನ ಸಂಸ್ಕಾರದ ಮಂತ್ರ, ಹೋಮ-ವಿಧಾನಗಳಿಂದ ಸ್ತ್ರೀ ಶುಚಿಯಾಗುತ್ತಾಳೆ  ಹಾಗೂ ಬೀಜಕ್ಷೇತ್ರ ಸಂಬಂಧಿ ದೋಷಗಳಿಂದ ಮುಕ್ತಳಾಗುತ್ತಾಳೆ. ಈ ಸಂಸ್ಕಾರ ನಡೆಸದೇ  ಇದ್ದಲ್ಲಿ ಗರ್ಭಸ್ಥ ಶಿಶುವು ದೋಷಮುಕ್ತವಾಗಲಾರದು ಎಂದು ಶಾಸ್ತ್ರಗಳ ಅಭಿಪ್ರಾಯ.


ದಂಪತಿಗಳು ಅಭ್ಯಂಗಸ್ನಾನ ಮಾಡಿ ಹೊಸವಸ್ತ್ರಗಳನ್ನು ಧರಿಸಿ, ಕುಲದೇವತೆನ್ನೂ ಇಷ್ಟದೇವತೆಯನ್ನೂ ನಮಸ್ಕರಿಸಿ, ಗುರುಹಿರಿಯರ ಆಶೀರ್ವಾದವನ್ನು ಪಡೆದು, ಬ್ರಾಹ್ಮಣರು ಮತ್ತು ಕುಲಪುರೋಹಿತರ ಸಹಾಯದಿಂದ ಕರ್ಮಾ ಪ್ರಾರಂಭಿಸಬೇಕು. ಪತ್ನಿಯನ್ನು ದಕ್ಷಿಣಭಾಗದಲ್ಲಿ ಕುಳ್ಳಿರಿಸಿ ಪುಣ್ಯಾಹವಾಚನ, ನಾಂದಿಶ್ರಾದ್ಧಾದಿಗಳನ್ನು ಮುಗಿಸಿ ಸಂಕಲ್ಪವನ್ನು ಮಾಡಬೇಕು. ಪತಿ ತನ್ನ ಕೈಯಾರೆ ಹೋಮವನ್ನು ಮಾಡುವುದು ಉತ್ತಮ. ಅನಿವಾರ್ಯ ಕಾರಣಗಳಿಂದಾಗಿ, ಅಶಕ್ತನಾಗಿರುವುದರಿಂದ ಮಾಡಲು ಅಸಾಧ್ಯವಾದರೆ, ಕುಲಪುರೋಹಿತರಿಂದ ಮಾಡಿಸುವುದು ಉತ್ತಮ.

ಮದುವೆಯ ನಂತರ ನಿತ್ಯೋಪಾಸನೆ ಮಾಡದಿದ್ದಲ್ಲಿ ಪುನಃಸಂಧಾನ ಪೂರ್ವಕ ಗರ್ಭಾಧಾನವನ್ನು ನಡೆಸಬೇಕು. "ಮರುತ್"ಎಂಬ ಅಗ್ನಿಯನ್ನು ಪ್ರತಿಷ್ಠಾಪಿಸಿ, ಅನ್ವಾಧಾನ ಮಾಡುವುದು. ಪ್ರಜಾಪತಿಗೆ ಚರುವಿನ  ಒಂದು ಆಹುತಿ, ವಿಷ್ಣುವಿಗೆ ಆರು, ಪುನಃ  ಪ್ರಜಾಪತಿಗೆ ಒಂದು - ಹೀಗೆ ಏಳು ಅಜ್ಯಾಆಹುತಿಗಳೂ, ಮಧ್ಯೆ ಗ್ರಹ್ಯೋಕ್ತ ವಿಧಾನಗಳಿಂದೊಡಗೂಡಿದಂತೆ ಸ್ಥಾಲಿಪಾಕ ವಿಧಿಯಲ್ಲಿ ಕ್ರಮ ಮುಂದುವರಿಸಿ, ಅದೇ ಅಗ್ನಿಯಲ್ಲಿ ಚರುವನ್ನು ಬೇಯಿಸಿ, ಅವಧಾನ ಧರ್ಮದಿಂದ ಪ್ರಜಾಪತಿಗೆ ನಾಮಮಂತ್ರದಿಂದ ಹೋಮಿಸಿ, ವಿಷ್ಣುವಿಗೂ ಪ್ರಜಾಪತಿಗೂ ಅಜ್ಯಾಹುತಿಯನ್ನು ಆಯಾ ಮಂತ್ರಗಳಿಂದ ಕೊಡಬೇಕು. ನಂತರ ಪಾಪಪರಿಹಾರಕವಾದ ಎಂಟು ಮಂತ್ರಗಳಿಂದ ಪತ್ನಿಯ ತಲೆಯನ್ನು ಪೂರ್ವಕ್ಕೆ ಬೆರಳತುದಿಗಳಿರುವಂತೆ ಸ್ಪರ್ಶಿಸಬೇಕು. ಕೈತೊಳೆದು ಒಂದು ಮಂತ್ರದಿಂದ ಔಷಧಿದೇವತೆಯನ್ನು ಜಪಿಸಿ, ಎಂಟು ಮಂತ್ರಗಳಿಂದ ಅಗ್ನಿಯನ್ನೂ, ಐದು ಮಂತ್ರಗಳಿಂದ ಸೂರ್ಯನನ್ನೂ ಉಪಸ್ಥಾನ ಮಾಡುವುದು.

ಅನಂತರ ಅಶ್ವಗಂಧದ ಬದಲಿಗೆ, ದೂರ್ವಾಂಕುರದ ರಸವನ್ನು ವಸ್ತ್ರದಲ್ಲಿ ಹಿಂಡುತ್ತಾ ಪತ್ನಿಯ ಬಲಮೂಗಿನಲ್ಲಿ ಸಮಂತ್ರಕವಾಗಿ ಸುರಿಯಬೇಕು. ಆಕೆಯು ಶ್ವಾಸ ಎಳೆದುಕೊಳ್ಳುವುದರಿಂದ ಅದು ಉದರಕ್ಕೆ ಹೋಗಿ ಸೇರುವುದು. ಅನಂತರ ಆಮಂತ್ರಕವಾಗಿ, ಅಂದರೆ ಮಂತ್ರವಿಲ್ಲದೆ ಆಚಮನ ಮಾಡಿಸಿ ಸ್ವಿಷ್ಟಕೃದಾದಿ  ಹೋಮಶೇಷವನ್ನು ಪೂರೈಸಬೇಕು. ಆಮೇಲೆ ಕಲಶಗ್ರಹಣ ಕಾರ್ಯವನ್ನು ಮಾಡಬೇಕು. ಎರಡು ಕಲಶಗಳನ್ನು ಸ್ಥಾಪಿಸಿ ವರುಣ- ಸವಿತೃದೇವತೆಗಳನ್ನು ಆಹ್ವಾನಿಸಿ ಷೋಡಶೋಪಚಾರಗಳಿಂದ ಪೂಜಿಸಬೇಕು. ಪತ್ನಿಯು ಪತಿಗೆ ಅಭಿಮುಖವಾಗಿ ಪೂರ್ವದಿಕ್ಕಿನಲ್ಲಿ ಕುಳಿತಿಕೊಳ್ಳಬೇಕು. ಇಬ್ಬರೂ ಎಡಕೈಯಲ್ಲಿ ಐದು ತಾಂಬೂಲ, ಒಂದು ಅಡಿಕೆ ಹಿಡಿದು, ಬಲಕೈಯಲ್ಲಿ ಅಕ್ಷತೆಗಳಿಂದ ಪ್ರಜಾಪತಿಗೆ ಐದು ಮಂತ್ರಗಳಿಂದ ಪೂಜಿಸಬೇಕು.

ಮೊದಲು ಪತಿಯು ಉತ್ತರ ಕಲಶವನ್ನು ಎತ್ತಿ ಪತ್ನಿಯ ಕೈಗೆ ಕೊಟ್ಟು ನಂತರ ಜೊತೆಯಾಗಿ ಅದರ ಯಥಾಸ್ಥಾನದಲ್ಲಿಟ್ಟು  ಪೂಜಿಸಬೇಕು. ಹೀಗೆಯೇ ಮೂರು ಸಲ ಮಾಡಬೇಕು. ಆದರೆ ಮೂರನೆಯ ಸಾಲಕ್ಕೆ ಅವಳು ಕಲಶವನ್ನು ಹಿಡಿದುಕೊಂಡು ನಿಂತುಕೊಂಡು ಒಂದು ಪ್ರದಕ್ಷಿಣೆ ಮಾಡಿ ಕಲಶತೀರ್ಥವನ್ನು ಪತಿಗೆ ಪ್ರೋಕ್ಷಿಸಿ ತಾನೂ ಪ್ರೋಕ್ಷಿಸಿಕೊಳ್ಳಬೇಕು.

ನಂತರ ಇಬ್ಬರೂ ಕಲಶವನ್ನು ಯಥಾಸ್ಥಾನದಲ್ಲಿಟ್ಟು ಪತ್ನಿಯು ಗೆರಸೆಯಲ್ಲಿ ಅಕ್ಕಿಯನ್ನು ಹಾಕಿ ನಾಲ್ಕು ದಿಕ್ಕುಗಳಿಗೂ ಮುಖಮಾಡಿ ಗೇರಬೇಕು. ತಮ್ಮ ಕೈಯಲ್ಲಿರುವ ತಾಂಬೂಲವನ್ನು ಪರಸ್ಪರ ವಿನಿಮಯ ಮಾಡಿಕೊಂಡು ಪತ್ನಿಯು ಪತಿಗೆ ನಮಸ್ಕರಿಸಿ ದಕ್ಷಿಣದಲ್ಲಿ ಪೂರ್ವದಂತೆ ಕುಳಿತುಕೊಳ್ಳಬೇಕು. ಉತ್ತರ ಪೂಜಾಪೂರ್ವಕ ಕಳಶದೇವತೆಗಳನ್ನು ಉದ್ವಾಸನೆ ಮಾಡಿ ಬ್ರಾಹ್ಮಣರನ್ನು ತಾಂಬೂಲ- ಫಲ- ಭೋಜನ ದಕ್ಷಿಣಾದಿಗಳಿಂದ ಸಂತೋಷಪಡಿಸಿ ಆಶೀರ್ವಾದ ಪಡೆದುಕೊಳ್ಳಬೇಕು.

ರಾತ್ರಿ ಆಹಾರವು ಜೀರ್ಣವಾದ ನಂತರ ಎರಡನೇ ಯಾಮದಲ್ಲಿ ದಂಪತಿಗಳು ಸಂತೋಷಚಿತ್ತರಾಗಿ, ಮಧ್ಯಾಹ್ನ ಆರಾಧಿಸಿದ ದೇವತೆಗಳನ್ನು ಸ್ಮರಿಸಿಕೊಂಡು ಸಮಾಗಮ ನಡೆಸಬೇಕು.

ಪರಾಶರ ಸಂಹಿತೆಯಾ ಪ್ರಕಾರ ಪತ್ನಿಯು ರಜಸ್ವಲೆಯಾದ ದಿನದಿಂದ ಈ ಕೆಳಗಿನಂತೆ ಗರ್ಭವನ್ನು ಧರಿಸಿದರೆ ಆಯಾ ಪ್ರಕಾರದ ಸಂತತಿಯು ದೊರೆಯುವುದೆನ್ನುವುದು ನೀತಿ.
೪ನೇ ರಾತ್ರಿ : ಕಡಿಮೆ ಆಯಸ್ಸು ಇರುವ ಪುತ್ರ
೫ನೇ ರಾತ್ರಿ : ಪುತ್ರಿ
೬ನೇ ರಾತ್ರಿ : ಕುಟುಂಬವನ್ನು ಬೆಳೆಸುವ ಪುತ್ರ
೭ನೇ ರಾತ್ರಿ : ಬಂಜೆಯಾಗಿ ಉಳಿಯುವ ಪುತ್ರಿ
೮ನೇ ರಾತ್ರಿ : ಪುತ್ರ
೯ನೇ ರಾತ್ರಿ : ಸುಂದರಿಯಾದ ಪುತ್ರಿ
೧೦ನೇ ರಾತ್ರಿ : ಪ್ರಭಾವಶಾಲಿ ಉನ್ನತ ಶ್ರೇಣಿಯ ಪುತ್ರ
೧೧ನೇ ರಾತ್ರಿ : ದರಿದ್ರಳಾದ ಕುರೂಪಿ ಪುತ್ರಿ
೧೨ನೇ ರಾತ್ರಿ : ಶ್ರೀಮಂತನಾಗುವ ಪುತ್ರ
೧೩ನೇ ರಾತ್ರಿ : ದುಷ್ಟ ಮನಸ್ಸಿನ ಪುತ್ರಿ
೧೪ನೇ ರಾತ್ರಿ : ಕರ್ತವ್ಯನಿಷ್ಠ ಹಾಗೂ ಉದಾತ್ತ ಪುತ್ರ
೧೫ನೇ ರಾತ್ರಿ : ಶ್ರೀಮಂತಳಾಗುವ ಹಾಗೂ ಅದೃಷ್ಟವಂತೆ ಪುತ್ರಿ
೧೬ನೇ ರಾತ್ರಿ : ವಿದ್ಯಾವಂತ ಹಾಗೂ ಬುದ್ಧಿವಂತ ಪುತ್ರ

ಗರ್ಭಾಧಾನ ಸಂಸ್ಕಾರದಿಂದ ದೋಷಗಳು ಪರಿಹಾರವಾಗಿ ಉತ್ತಮ ಸಂತತಿಯನ್ನು ಪಡೆಯುವರೆನ್ನುವುದು ನಂಬಿಕೆ.


(ಷೋಡಶ ಸಂಸ್ಕಾರ (೨) - ಪುಂಸವನ  --> ಮುಂದೆ ಓದಿ)

Monday 8 June 2020

ಶಿವಳ್ಳಿ ಬ್ರಾಹ್ಮಣರ ಪೂರ್ವ ಷೋಡಶ ಸಂಸ್ಕಾರ

"ಪೂರ್ವ ಷೋಡಶ ಸಂಸ್ಕಾರ" ಅಂದರೆ ಮರಣ ಪೂರ್ವದಲ್ಲಿ ನಡೆಸುವ ಸಂಸ್ಕಾರಗಳು. ಜೀವಿತದಲ್ಲಿರುವಾಗ ಪ್ರತಿಯೊಂದು ಜನಿಸಿದ ಶಿಶುವಿಗೆ ಹುಟ್ಟಿದಂದಿನಿಂದ ಅಂತ್ಯಕಾಲದವರೆಗೆ ನಡೆಸಲೇಬೇಕಾದಂತಹ ಸಂಸ್ಕಾರಗಳು ಇವು.


"ಗರ್ಭಾಧಾನಂ ಪುಂಸವನಂ ಸೀಮಂತೋ ವೈಷ್ಣವೋ ಬಲಿಃ ।
ಜಾತಕಂ ನಾಮ ನಿಷ್ಕ್ರಾಮೋನ್ನಾಶನಂ ಚೌಳಕರ್ಮಂ ಚ।।

ಉಪನೀತಿ ಮಹಾನಾಮ್ನೀ ಮಹಾವ್ರತಮತಃ ಪರಮ್ ।
ಉಪನಿಷಚ್ಛ ಗೋದಾನಂ ಸಮಾವರ್ತನಮೇವ ಚ ।।

ವಿವಾಹಶ್ಚೈವ ಮಿತ್ಯೇತಾಃ ಸಂಸ್ಕಾರಾಃ ಷೋಡಶಕ್ರಿಯಾಃ ।
ಆಧಾನಾತ್ ಚೌಲಪರ್ಯಂತಾಃ ಸಂಸ್ಕಾರಾಃ ದೋಷಮಾರ್ಜನಾಃ ।।

ಬಂಧನಾತ್ ಸ್ನಾನಪರ್ಯಂತಾಃ ಅತಿಶಯಾಧಾನ ಮುಚ್ಯತೇ ।
ವೈವಾಹಿಕೇತಿ ಸಂಸ್ಕಾರಾಃ  ಸ್ಮೃತ ಊನಾಂಗ ಪೂರಣಃ ।।

ಸಂಸ್ಕಾರ ರಹಿತಾ ಏತು  ತೇಶಾಂ ಜನ್ಮ ನಿರರ್ಥಕಂ ।। "

- ಅಂದರೆ, " ಗರ್ಭಾಧಾನ , ಪುಂಸವನ, ಸೀಮಂತ, ವಿಷ್ಣುಬಲಿ , ಜಾತಕರ್ಮ, ನಾಮಕರಣ, ಉಪನಿಷ್ಕ್ರಮಣ, ಅನ್ನಪ್ರಾಶನ, ಚೌಲ, ಉಪನಯನ, ಮಹಾನಾಮ್ನೀ, ಮಹಾವ್ರತ, ಗೋದಾನವ್ರತ, ಸಮಾವರ್ತನ, ವಿವಾಹ - ಹೀಗೆ ಹದಿನಾರು ಮುಖ್ಯ ಸಂಸ್ಕಾರಗಳು ಮತ್ತು ಅನವಲೋಭನ, ಕರ್ಣವೇಧಾದಿ ಕೆಲವು ಉಪಸಂಸ್ಕಾರಗಳು. ಗರ್ಭಾಧಾನದಿಂದ  ಚೌಲದ  ತನಕ ಸಂಸ್ಕಾರಗಳು ಬೀಜ-ಕ್ಷೇತ್ರಗಳಲ್ಲಿ ಉಂಟಾದ ದೋಷಮಾರ್ಜನಗಳೆಂದೂ ಉಪನಯನ ಮೊದಲ್ಗೊಂಡು ಸಮಾವರ್ತನದ  ತನಕ ಸಂಸ್ಕಾರಗಳು ವಿಶೇಷ ಜ್ಞಾನಾರ್ಜನೆಯ ಸಾಧನೆಯ ಮೂಲಕ ಆಚಾರ ವಿಚಾರಗಳಲ್ಲಿ ಆಧ್ಯಾತ್ಮಿಕ ಜೀವನಕ್ಕೆ ಅತಿಶಯವನ್ನುಂಟು ಮಾಡುವುದೆಂದೂ ಕೊನೆಯ ಮಹಾವಿಧಿಯು ಜೀವನದ ಸಾರ್ಥಕತೆಯ ಪೂರ್ಣತೆಯನ್ನು ಗಾಳಿಸುವುದೆಂದೂ ಜ್ಞಾನಿಗಳ ಮತ. ಮೇಲೆ ತಿಳಿಸಿದ ಸಂಸ್ಕಾರರಹಿತನಾದವನ ಬಾಳುವಿಕೆ ನಿರರ್ಥಕವೆಂದೂ ಸ್ಮ್ರಿತಿವಚನ."

ಈ ಶ್ಲೋಕದಿಂದ ಜೀವಿತಕಾಲದ ಹದಿನಾರು ಸಂಸ್ಕಾರಗಳು ಯಾವುವು ಎಂಬುದು ತಿಳಿಯುತ್ತದೆ. ಆ ಎಲ್ಲಾ ಹದಿನಾರು ಸಂಸ್ಕಾರಗಳನ್ನು ವಿವರವಾಗಿ ಮುಂದಿನ ಬ್ಲಾಗ್ ಗಳಲ್ಲಿಒಂದೊಂದಾಗಿ  ಓದಿ ತಿಳಿಯೋಣ.



ಪುನಃಸಂಧಾನ:
 
ದ್ವಿಜನೆನಿಸಿದ ಬ್ರಹ್ಮಚಾರಿಯು ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆಗೆ "ಸಮುದ್ಭವ" ಎಂಬ  ಅಗ್ನಿಯ ಉಪಾಸನೆಯನ್ನೂ, ಸ್ನಾತಕವ್ರತಸ್ಥನಾಗಲು "ಸೂರ್ಯ" ಎಂಬ ಅಗ್ನಿಯ ಆರಾಧನೆಯನ್ನೂ, ಗ್ರಹಸ್ಥನಾಗಲು "ಯೋಜಕ" ಎಂಬ ಅಗ್ನಿಯ ಉಪಾಸನೆಯನ್ನೂ, ಬೆಳಿಗ್ಗೆ ಮತ್ತು ಮುಸ್ಸಂಜೆ ಕಾಲದಲ್ಲಿ ಮಾಡುತ್ತಾ ಇರಬೇಕು. ಇದನ್ನು ಸಾಯುವ ಕಾಲದವರೆಗೂ ಮಾಡುತ್ತಲೇ ಇರಬೇಕು. ವಿಸ್ತಾರವಾಗಿ ಮಾಡಲು ಅಸಾಧ್ಯವೆನಿಸಿದರೆ "ಅಜ್ಯೇನ ಜಲೇನ ವಾ" ಎಂದು ಸ್ಮೃತಿಗಳಲ್ಲಿ ತಿಳಿಸಿದಂತಾದರೂ ನಡೆಸಲೇ ಬೇಕು. ಉಪಾಸನೆ ನಡೆಸದಿದ್ದರೆ ಆತನಿಗೆ ಹಾಗೂ ಆತನ ಮಕ್ಕಳಿಗೆ ಸಂಸ್ಕಾರಾದಿಗಳನ್ನು ಮಾಡಲು ಅರ್ಹತೆಯು ಇರುವುದಿಲ್ಲ.  ಒಂದು ವೇಳೆ ಅನಿವಾರ್ಯ ಕಾರಣಗಳಿಂದಾಗಿ ಗ್ರಹಾಗ್ನಿ ವಿಚ್ಛೇದನಾಗಿರಲು "ಪುನಃಸಂಧಾನ" ವಿಧಾನದಿಂದ ಅಗ್ನಿಯನ್ನು ಸಂಪಾದಿಸಬೇಕು. ನಂತರವಷ್ಟೇ ಅವನಿಗೆ ಹೋಮ, ಸಂಸ್ಕಾರಾದಿಗಳನ್ನು ಮಾಡಲು ಅರ್ಹತೆ ದೊರೆಯುವುದು.


ಸಂಸ್ಕಾರಾದಿಗಳನ್ನು ಮಾಡಲು ಅರ್ಹನಾದ ಮೇಲೆ ಪ್ರತಿಯೊಬ್ಬ ಋಗ್ವೇದಿಯ ಬ್ರಾಹ್ಮಣನಿಗೆ ಷೋಡಶಸಂಸ್ಕಾರಗಳನ್ನು ಆಚರಿಸಲಿರುತ್ತದೆ.



(ಮುಂದೆ ಓದಿ)

Friday 5 June 2020

ಶಿವಳ್ಳಿ ಬ್ರಾಹ್ಮಣರ ಸಾಂಸ್ಕೃತಿಕ ಆಚರಣೆಗಳು (ಭಾಗ-1)

"ಜನ್ಮನಾ ಜಾಯತೇ ಜಂತುಃ " - ಅಂದರೆ ಹುಟ್ಟಿದಾಗ ಎಲ್ಲರೂ ಕೇವಲ ಜಂತುಗಳಾಗಿರುತ್ತಾರೆ. ಹುಟ್ಟಿನಿಂದಲೇ ಯಾರೂ ಸುಸಂಸ್ಕೃತರಲ್ಲ. ಚಿನ್ನದ ಅದಿರನ್ನು ಯಾವ ರೀತಿ ಸಂಸ್ಕರಿಸಿ ವಿವಿಧ ಆಕಾರ ನೀಡಿ ಉಪಯೋಗಿಸುತ್ತಾರೋ ಅಂತೆಯೇ ಮನುಷ್ಯನನ್ನೂ ಷೋಡಶ ಸಂಸ್ಕಾರಗಳಿಂದ ಸಂಸ್ಕರಿಸಿ ಧರ್ಮಕರ್ಮಾನುಚರಣೆ ಆಚರಿಸುವಂತೆ ಮಾಡಬೇಕು. ಆ ಮೂಲಕ ಸುಸಂಸ್ಕಾರ ಪ್ರತಿಯೊಬ್ಬರಿಗೂ ಅತ್ಯಗತ್ಯ. ವೇದವು ನಮ್ಮೆಲ್ಲರಿಗೆ ಎಲ್ಲಾ ವಿಷಯಗಳಿಗೆ ಹೇಗೆ ಪ್ರಮಾಣವೋ ಹಾಗೆಯೇ ಪರಂಪರಾಗತವಾದ ಸದಾಚಾರವೂ ಪ್ರಮಾಣವಾಗಿದೆ. 


"ಯಸ್ಮಾತ್ ಅಭ್ಯುದಯ ನಿಶ್ರೇಯಸ ಸಿದ್ಧಿಃ  ಸಧರ್ಮಃ " - ಅಂದರೆ, ಯಾವುದರಿಂದ ನಮ್ಮೆಲ್ಲರ ಅಭ್ಯುದಯ ಹಾಗೂ ಶ್ರೇಯಸ್ಸು ಸಾಧ್ಯವೋ ಅದೇ ಧರ್ಮವು. ಆದುದರಿಂದ ಆ ಮಾರ್ಗದಲ್ಲಿ "ಶ್ರದ್ಧೆ"ಯಿಂದ ನಡೆದರೆ ನಮಗೆ ಒಳಿತು ಖಂಡಿತ. ಅದಿಲ್ಲದಿದ್ದರೆ, ಆ ಕರ್ಮದಿಂದ ಸಿಗುವ ಫಲ ನಮಗೆ ದೊರೆಯದು. ನಾವೇ ತಪ್ಪಿಸಿಕೊಂಡಂತೆ. ವೈಜ್ಞಾನಿಕವಾಗಿಯೂ, ಅನುಭವದಿಂದಲೂ "ವೈದಿಕ ಕರ್ಮಾಚರಣೆ ತುಂಬಾ ಪರಿಣಾಮಕಾರಿ." ಎಂಬ ಇಂದಿನ ಶೋಧ ಗಮನಾರ್ಹವಾದದ್ದು. ಅಲ್ಲದೆ, ನಮ್ಮ ಸುಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು. ಇನ್ನು ಸಂಸ್ಕಾರದ ಕಾಲದ ವಿಷಯದಲ್ಲಿ ಹೇಳುವುದಾದರೆ, ಈ ಸಂಸ್ಕಾರಾದಿಗಳನ್ನು ಆಯಾ ಕಾಲಕ್ಕೆ ಮಾಡುವುದು ಒಳ್ಳೆಯದು. ಅನಿವಾರ್ಯದಲ್ಲಿ "ಅಕರಣೌ  ಕರಣೌ  ಶ್ರೇಯಃ" ಎಂಬಂತೆ ಯಾವುದೇ ಸತ್ಕಾರ್ಯವನ್ನು ಮಾಡದೆ ಇರುವುದಕ್ಕಿಂತ ಮಾಡುವುದು ಶ್ರೇಯಸ್ಕರ.

ಆದುದರಿಂದ, ಶಿವಳ್ಳಿ ಬ್ರಾಹ್ಮಣರು ಕೂಡ ಎಲ್ಲಾ ಸತ್ಕಾರ್ಯಗಳನ್ನು ತಮ್ಮ ತಮ್ಮ ವೇದದ ಆಚರಣೆಗಳ ಪ್ರಕಾರ ನಡೆಸುತ್ತಾ ಬರುತ್ತಾರೆ. ಒಂದೊಂದು ವೇದಗಳನ್ನು ಆಧಾರವಾಗಿರಿಸಿಕೊಂಡವರು ಒಂದೊಂದು ರೀತಿಯಲ್ಲಿ ಆಚರಣೆಗಳನ್ನು ಮಾಡುತ್ತಿರುತ್ತಾರೆ. ಈ ಭೂಮಿಯಲ್ಲಿ ಜನಿಸಿದ ಎಲ್ಲಾ ಬ್ರಾಹ್ಮಣರಿಗೂ ಸ್ವಜಾತಿ ವಿಹಿತ ಸಂಸ್ಕಾರಗಳು ಅವಶ್ಯವಾಗಿ ಪೂರೈಸಬೇಕಾದ ಕರ್ತವ್ಯಗಳಾಗಿವೆ. ಬ್ರಾಹ್ಮಣನಿಗೆ ಆಚರಿಸಲು ಷೋಡಶಸಂಸ್ಕಾರಗಳನ್ನು ಸ್ಮೃತಿಗಳಲ್ಲಿ ಮತ್ತು ಗೃಹಸೂತ್ರಗಳಲ್ಲಿ ಹೇಳಲಾಗಿದೆ. ವಿಹಿತಕಾಲದಲ್ಲಿ ನಡೆಸುವ ಈ ಸಂಸ್ಕಾರಗಳಿಂದ ಅವನ ಆತ್ಮ ಮತ್ತು ಮನಸ್ಸು ಪರಿಷ್ಕಾರ ಹೊಂದಿ ಸದಾಚಾರಸಂಪನ್ನ, ಸುಸಂಸ್ಕೃತ ಮಾನವನೆಂದೆನಿಸಿ ಇಹಪರದಲ್ಲಿ ಸುಖಿಯಾಗಬಲ್ಲನು. ಆದರೆ, ಇಂದಿನ ಲೌಕಿಕ ಶಿಕ್ಷಣ ಕ್ರಮ ಮತ್ತು ಆಧುನಿಕ ಜೀವನ ವ್ಯವಸ್ಥೆಯಿಂದಾಗಿ ಕೆಲವು ಸಂಸ್ಕಾರಗಳು ರೂಢಿಯಲ್ಲಿಲ್ಲ.
ಬದುಕು ಬಂಗಾರವಾಗಬೇಕೆಂದು ಪ್ರತಿಯೊಬ್ಬರೂ ಆಸೆ ಪಡುತ್ತಾರೆ. ನಶ್ವರವಾಗುವ ಈ ಶರೀರದೊಂದಿಗೆ ಚಂಚಲವಾದ ಮನಸ್ಸನ್ನು ಬುದ್ಧಿಯಿಂದ ತಿದ್ದಿ, ಧಾರ್ಮಿಕವಾದ ಮಾರ್ಗದಲ್ಲಿ ಚಲಿಸಿ, ಆಧ್ಯಾತ್ಮಿಕ ಜ್ಞಾನದಿಂದ ಆತ್ಮವನ್ನು ತೃಪ್ತಿಪಡಿಸಿದಾಗಲೇ ಬದುಕು ಬಂಗಾರವಾಗಬಲ್ಲದು. ವ್ಯಾವಹಾರಿಕ ಜೀವನದಿಂದ ಗಳಿಸಿದ ಸಂಪತ್ತು, ಸ್ತ್ರೀ- ಗೃಹಾದಿ ಸುಖಗಳು ಕೇವಲ ತಾತ್ಕಾಲಿಕ. ಧಾರ್ಮಿಕ ಬುದ್ಧಿಯ ಧರ್ಮಗಳ ಮಾರ್ಗದಲ್ಲಿರುವುದೇ ನಿಜವಾದ ಸುಖ.

ಇಂದು ಸಮಾಜದಲ್ಲಿ ಕೆಲವೇ ಸಂಸ್ಕಾರಗಳು ಬಳಕೆಯಲ್ಲಿದೆ. ಕೇವಲ ಧಾರ್ಮಿಕ ಮುಖವಾಡದೊಂದಿಗೆ ನಡೆಸುವ ಸಂಸ್ಕಾರ ಕ್ರಿಯೆಗಳು ತಮ್ಮ ನಿಜವಾದ ಅರ್ಥ ಕಳೆದುಕೊಂಡು ವಾದ್ಯ, ಫೋಟೋ, ವಿಡಿಯೋ ಇತ್ಯಾದಿ ಗದ್ದಲಗಳಿಂದ ಕೊನೆಗೊಳ್ಳುತ್ತಿದೆ. ಪೌರೋಹಿತ್ಯವೂ ಇಂದು ವ್ಯಾವಹಾರಿಕವಾಗಿದೆ. ಇಂದು ಆಯಾ ಕೆಲಸಕ್ಕೆ ನಡೆಸಬೇಕಾದ ಸಂಸ್ಕಾರ ಕ್ರಿಯೆಗಳ ವಿಶೇಷತೆ, ಅಗತ್ಯ, ಅದರ ನಿಜವಾದ ಅರ್ಥವನ್ನು ತಿಳಿಸಿ ಎಲ್ಲರನ್ನೂ ಸುಸಂಸ್ಕೃತರನ್ನಾಗಿ ಮಾಡುವುದು ಅತಿ ಅಗತ್ಯವಿದೆ. ಹಾಗೆಯೇ, ಬ್ರಾಹ್ಮಣರಿಗಾಗಿ "ಷೋಡಶಸಂಸ್ಕಾರ" ಎಂಬ ಹದಿನಾರು ವಿಧದ ಆಚರಣೆಗಳನ್ನು ಹಿಂದಿನ ಶ್ರೇಷ್ಠ ಋಷಿಗಳು ತಮ್ಮ ಸ್ಮೃತಿಗಳಲ್ಲಿ ಬರೆದಿರುವರು. ಋಗ್ವೇದದ ಆಧಾರದಲ್ಲಿ ನೀಡಿರುವ ಆ ೧೬ ವಿಧದ ಆಚರಣೆಗಳನ್ನು ಈ ಮುಂದಿನಂತೆ ಆಚರಿಸಲಾಗುತ್ತದೆ.

(ಮುಂದೆ ಓದಿ)


Thursday 4 June 2020

ಶಿವಳ್ಳಿ ಬ್ರಾಹ್ಮಣರ ಕುಲ ಗೋತ್ರ ವಿವರಣೆ

"ವಿಶ್ವಾಮಿತ್ರೋ ಜಮದಗ್ನಿರ್ಭರಧ್ವಾಜೋಥ  ಗೌತಮಃ ।
ಅತ್ರಿ ವಸಿಷ್ಟಃ   ಕಶ್ಯಪ ಇತ್ಯೇತೇ ಸಪ್ತ ಋಷಯಃ ।।
ಸಪ್ತನಾ೦ ಋಷೀಣಾಮಗಸ್ತ್ಯಾಷ್ಟಮಾನಾ೦ ಯದಪತ್ಯಂ ತದ್ಗೋತ್ರಮಿತ್ಯುಚ್ಯತೇ ।।" - ಅಂದರೆ, ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ, ಗೌತಮ, ಅತ್ರಿ, ವಸಿಷ್ಠ, ಕಶ್ಯಪ, ಇವರು ಸಪ್ತರ್ಷಿಗಳು. ಇವರ ಮತ್ತು ಎಂಟನೆಯವರಾದ ಅಗಸ್ತ್ಯರ ವಂಶದಲ್ಲಿ ಜನಿಸಿದವನು ಆಯಾ ಗೋತ್ರದವನು ಎಂದೆನಿಸಿಕೊಳ್ಳುತ್ತಾನೆ. ಅಂದರೆ, ಈ ಎಂಟು ಋಷಿಗಳ ಸಂತಾನದವರು ವಿಶ್ವಾಮಿತ್ರ ಗೋತ್ರ, ಜಮದಗ್ನಿ ಗೋತ್ರ, ಎಂದು ಮುಂತಾಗಿ ಆಯಾ ಋಷಿಗಳ ಹೆಸರಿನ ಗೋತ್ರದವರೆಂದು ಹೆಸರು ಪಡೆಯುತ್ತಾರೆ.


ಗೋತ್ರವೆಂದರೆ ವಂಶವೆಂದೂ, ವಂಶದಲ್ಲಿ ಜನಿಸಿದವರೆಂದೂ ಅರ್ಥವಿದೆ. ಪ್ರಧಾನವಾಗಿ ಈ ಎಂಟು ಋಷಿಗಳೇ ಗೋತ್ರ ಪ್ರವರ್ತಕರು. ಆದರೆ, ಈ ವಂಶದಲ್ಲಿ ಹುಟ್ಟಿದ ಕೆಲವು ಋಷಿಗಳು ತಮ್ಮ ತಪ ಸಾಮರ್ಥ್ಯದಿಂದ ಗೋತ್ರಪ್ರವರ್ತಕರಾದರು. ಆದುದರಿಂದ ಕೌಂಡಿನ್ಯ, ಅಶ್ವಲಾಯನ ಮೊದಲಾದವರೂ ಗೋತ್ರ ಪ್ರವರ್ತಕರೇ.

ಯಜ್ಞದಲ್ಲಿ ವರಿಸಲ್ಪಟ್ಟವರು ಪ್ರವರರು. ಇವರು ಆಯಾ ಗೋತ್ರಕಾರರ ಸಂತತಿಯವರೂ ಮಂತ್ರದಷ್ಟಾರರೂ ಆಗಿದ್ದರೆ. ಯಾರನ್ನೂ ವರಣ ಮಾಡಿ ಯಜಮಾನನು ಪ್ರಾರ್ಥನೆ ಸಲ್ಲಿಸುವರೋ ಅವರು ಪ್ರವರರ್ಷಿಗಳು. ಈ ಪ್ರವರರ್ಷಿಗಳು ಗೋತ್ರ ಪ್ರವರ್ತಕ ವಂಶದವರೇ ಆಗಿದ್ದು, ಒಂದು ವಿಶಿಷ್ಟವಾದ ಗೌರವ ಸ್ಥಾನವನ್ನು ಪಡೆದುಕೊಂಡು ಸ್ಮರಣೀಯರಾಗಿದ್ದಾರೆ.

ಪ್ರತಿಯೊಬ್ಬ ಬ್ರಾಹ್ಮಣನಿಗೂ ಗೋತ್ರ-ಪ್ರವರಗಳಿದ್ದೇ ಇರುತ್ತವೆ. ಪ್ರತಿಯೊಬ್ಬ ಬ್ರಾಹ್ಮಣನ ದೇಹದಲ್ಲೂ ಆ ಮಹಾನ್ ಋಷಿಗಳ ಒಂದು ರಕ್ತಕಣವಾದರೂ ಹರಿಯುತ್ತಾ ಇರುತ್ತದೆ. ಒಬ್ಬ ಬ್ರಾಹ್ಮಣನ ಮುಖವನ್ನು ನೋಡಿದಾಗ ಆತನಲ್ಲಿ ಒಂದು ತೇಜಸ್ಸಿನ ಅಂಶ ಎದ್ದು ಕಾಣುತ್ತದೆ. ನಿತ್ಯ ಕರ್ಮಾನುಷ್ಠಾನದಲ್ಲಿ ನಿರತರಾದವರು ಯಾರೋ ಅವರಲ್ಲಿ ಈ ತೇಜಸ್ಸು ಇನ್ನೂ ಅಧಿಕವಾಗಿ ಇರುತ್ತದೆ. ಇದನ್ನೇ "ಬ್ರಹ್ಮವರ್ಚಸ್ಸು" ಎನ್ನುವುದು. ಇಂದು ಬ್ರಾಹ್ಮಣವರ್ಗದಲ್ಲಿ ಸರ್ವೋತ್ತರವಾದ ಮೇಧಾಶಕ್ತಿಯೂ, ಲೋಕೋಪಕಾರ ಬುದ್ಧಿಯೂ, ಶಮದಮಾದಿ ಗುಣಗಳ ಒಂದಂಶವೂ ತೋರುತ್ತಿದ್ದರೆ, ಅದು ನಮ್ಮ ಪ್ರವಿಹೀನ ಋಷಿಗಳಿಂದ ಬಳುವಳಿಯಾಗಿ ಬಂದದ್ದು. ಜಗತ್ತಿನ ಎಲ್ಲಾ ಬಳಗಳಲ್ಲಿಯೂ ಬ್ರಹ್ಮವರ್ಚಸ್ಸಿನ ಬಲವೇ ಶ್ರೇಷ್ಠವಾದ ಬಲ. ಆದುದರಿಂದ, ಇಹಪರ ಬದುಕಿಗೆ ಸಂಬಂಧಿಸಿದ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ವಿಧದ ಪುರುಷಾರ್ಥಗಳನ್ನೂ ಪೂರ್ಣವಾಗಿ ಸಾಧಿಸಲು ಸಾಧ್ಯ.

ಬ್ರಾಹ್ಮಣರಿಗೆ ವೇದಗಳು ಆಧಾರಗ್ರಂಥಗಳು ಹಾಗೂ ಅತ್ಯಂತ ಪವಿತ್ರವಾದವುಗಳು. ವೇದಗಳು ಅಪೌರುಷೇಯ. ಪುರುಷನಿರ್ಮಿತವಲ್ಲ. ಧರ್ಮಶಾಸ್ತ್ರ ಮೊದಲಾದವುಗಳೆಲ್ಲವೂ ವೇದ ಮೂಲಕವಾಗಿ ಬಂದವುಗಳು. ಅವುಗಳನ್ನು ಋಷಿ ಮುನಿಗಳು ನಿರ್ಮಿಸಿದ್ದಾರೆ. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ - ಇವುಗಳು ಚತುರ್ವೇದಗಳು. ಋಗ್ವೇದವನ್ನು ಅಧ್ಯಯನ ಮಾಡುವವರು ಋಗ್ವೇದಿಗಳು,  ಹೀಗೆಯೇ ಯಜುರ್ವೇದೀ, ಸಾಮವೇದೀ ಹಾಗೂ ಅಥರ್ವಣವೇದಿಗಳಾಗುತ್ತಾರೆ.

ಪ್ರತಿಯೊಬ್ಬ ಬ್ರಾಹ್ಮಣನೂ ತನ್ನ ವೇದ ಶಾಖೆ, ಸೂತ್ರ, ಗೋತ್ರ, ಪ್ರವರ, ಕುಲದೇವತೆ, ಗುರುಪೀಠ, ತಂದೆ - ತಾಯಿ, ಅಜ್ಜ- ಅಜ್ಜಿ, ಮುತ್ತಜ್ಜ - ಮುತ್ತಜ್ಜಿ, ಇವರ ಹೆಸರುಗಳು, ಮಾತೃವರ್ಗದ ಗೋತ್ರ ಮತ್ತು ಹಿರಿಯರ ಹೆಸರುಗಳು, ಹೆತ್ತವರು ಮೃತರಾಗಿದ್ದಾರೆ ಅವರ ಮರಣದ ತಿಂಗಳು, ಪಕ್ಷ ಮತ್ತು ತಿಥಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಪ್ರತಿಯೊಬ್ಬ ಬ್ರಾಹ್ಮಣನೂ ತನ್ನ ಮನೆಯಲ್ಲಿ ತನ್ನ ಇಷ್ಟದೇವರ ಪಟ , ಕುಲದೇವತೆಯ ಪಟ , ಉಡುವ ಮತ್ತು ಹೊದೆಯುವ ಮಡಿಬಟ್ಟೆ, ಹರಿವಾಣ, ತಂಬಿಗೆ, ಪಂಚಪಾತ್ರೆ, ಉದ್ಧರಣೆ, ಘಂಟೆ, ಆರತಿ, ದೀಪ ಹಚ್ಚುವ ಗಿಣಗಳು, ವಿಭೂತಿ, ಅರಸಿನ, ಕುಂಕುಮ, ರಂಗವಲ್ಲಿ, ಧೂಪದ ಕಟ್ಟೆ , ಬತ್ತಿ, ಕರ್ಪೂರ, ಶ್ರೀಗಂಧ, ಚಂದನ, ಭಗವದ್ಗೀತೆಯ ಪುಸ್ತಕ,ವಿಷ್ಣುಸಹಸ್ರನಾಮದ ಪುಸ್ತಕ, ಆಯಾ ವರ್ಷದ ಪಂಚಾಂಗ , ಧರ್ಭೆ, ಕರಿಯ ಎಳ್ಳು, ಮರದ ಮಣೆ , ಚಿಕ್ಕ ಚಾಪೆಗಳು, ಬಿಡಿ ಜನಿವಾರಗಳು, ಗಂಗಾಜಲವನ್ನು ತುಂಬಿದ ಕಲಶ, ಶಂಖ, ಜಾಗಟೆ, ತಾಳ - ಇವುಗಳು ಮುಖ್ಯವಾಗಿ ಇರಬೇಕು.


ಪ್ರತಿಯೊಬ್ಬ ಬ್ರಾಹ್ಮಣನೂ ಆತ ವೈದಿಕನಾಗಿರಲಿ, ಲೌಕಿಕನಾಗಿರಲಿ ಯಥಾಶಕ್ತಿಯಾಗಿ ವೈದಿಕ ಧರ್ಮವನ್ನು ಪಾಲಿಸಲೇಬೇಕು. ಯಾರ ಅಂತರಂಗದಲ್ಲಿ ಧರ್ಮದ ಬೀಜವಿದೆಯೋ, ನೀರಿಲ್ಲದೆ ಮೊಳಕೆಯಾಗದೆ, ಚಿಗುರದೆ ಇದೆಯೋ, ಅಂಥವರು ತಮ್ಮ ಅಂತರಂಗದಲ್ಲಿರುವ ಧರ್ಮದ ಬೀಜದ ಬೆಳವಣಿಗೆ ಆಗುವುದಕ್ಕಾಗಿ, ಧಾರ್ಮಿಕ ಆಚರಣೆಗಳನ್ನು ನಡೆಸುತ್ತಾ ಬರಬೇಕು. ಆಗ ಮಾತ್ರವೇ ಧರ್ಮದ ಚಿಗುರಿನ ಗಿಡವು ಬಾಡದೇ  ಬೆಳೆದು ಶಾಶ್ವತವಾದ ಮರವಾಗಲು ಸಾಧ್ಯವಿದೆ,

ಹೀಗೆ ಧಾರ್ಮಿಕವಾಗಿ ಮುಂದಿರುವ, ಸಕಲ ಧಾರ್ಮಿಕ ಆಚರಣೆಗಳನ್ನೂ ಸ್ವಾರ್ಥವಿಲ್ಲದೆ, ತನ್ನಿಂದ ಸಾಧ್ಯವಿರುವಷ್ಟರ ಮಟ್ಟಿನಲ್ಲಿ  ನಡೆಸಿಕೊಂಡು ಬರುವ ಬ್ರಾಹ್ಮಣನೂ ಕೊಳಚೆ ನೀರಿನಲ್ಲೂ ಶೋಭಿಸುವ ತಾವರೆಯಂತೆ ಆಕಾಶದಲ್ಲಿ ಮಿನುಗಿ ಎಲ್ಲರನ್ನೂ ಆಕರ್ಷಿಸುವ ತಾರೆಯಂತೆ ಶೋಭಿಸುವುದರಲ್ಲಿ ಸಂದೇಹವೇ ಇಲ್ಲ.



[ಅಧ್ಯಯನ ಗ್ರಂಥ: "ಗ್ರಾಮ ಪದ್ಧತಿ" (ಐತಿಹಾಸಿಕ ಹಿನ್ನಲೆಗಾಗಿ)]




Wednesday 3 June 2020

ಶಿವಳ್ಳಿ ಬ್ರಾಹ್ಮಣರು - ಒಂದು ಇತಿಹಾಸ ( ಭಾಗ - 2) ಐತಿಹಾಸಿಕ ಕಥೆ

ಆದಿಯಲ್ಲಿ ವಿಷ್ಣುವಿನ ದಶರೂಪಗಳಲ್ಲಿ ಒಬ್ಬರಾದ ಪರಶುರಾಮ ದೇವರು ಪಶ್ಚಿಮ ಸಮುದ್ರನ ಕೈಯಿಂದ ಪಡೆದುಕೊಂಡಂತಹ ದೇಶವನ್ನು "ಪರಶುರಾಮ ಕ್ಷೇತ್ರ" ಎಂದು ಕರೆಯುತ್ತಿದ್ದರು.

ಆ ಪ್ರದೇಶದಲ್ಲಿ ಬ್ರಾಹ್ಮಣರ ಅಸ್ತಿತ್ವವೇ ಇರದ ಕಾರಣ ಸಮುದ್ರ ಮಧ್ಯದ ಕುದುರುಗಳಲ್ಲಿ ವಾಸಿಸುತ್ತಿದ್ದ ದಾಸರು, ರೇವರರು ಮುಂತಾದ ಮೊಗೇರ ಜನಾಂಗದ ಜನರಿಗೆ  ಸಣಬಿನ ನೂಲಿನಿಂದ ತಯಾರಿಸಿದ ಯಜ್ನೋಪವೀತವನ್ನು ಹಾಕಿಸಿ ಅವರಿಗೆ ಸ್ವಸಂಪಾದಿತ ಭೂಮಿಯನ್ನು ದಾನದಂತೆ ನೀಡಿ "ದುರ್ಭಿಕ್ಷ ಇಲ್ಲದೆ ಸಂಪೂರ್ಣ ಕಾಮಕರಾಗಿ ಇರಿ" ಎಂದು ವರವಿತ್ತರು. ಮಾತ್ರವಲ್ಲದೆ, ಆ ಜನರಿಗೆ ಕಷ್ಟ ಬಂದ  ಸಮಯದಲ್ಲಿ ಎಲ್ಲರೂ ಜೊತೆಗೂಡಿ ನನ್ನನ್ನು ಕರೆದಕೂಡಲೇ ಬಂದು ಸಹಕರಿಸಿ ಹೋಗುವೆನೆಂದು ಭರವಸೆ ನೀಡಿದ ಪರಶುರಾಮ ದೇವರು ಮಹೇಂದ್ರ ಪರ್ವತಕ್ಕೆ ತಪಸ್ಸಿಗೆಂದು ಹೊರಟುಹೋದರು. ಸ್ವಲ್ಪ ಸಮಯದವರೆಗೆ ಸಂತೋಷದಿಂದಿದ್ದ ಆ "ನೆಪಮಾತ್ರದ" ಬ್ರಾಹ್ಮಣರು ಪರಶುರಾಮನನ್ನು ಪರೀಕ್ಷಿಸುವ ಸಲುವಾಗಿ "ರಾಮದೇವರೇ..." ಎಂದು ಎಲ್ಲರೂ ಜೊತೆಗೂಡಿ ಕರೆದರು. ಓಡಿ  ಬಂದ  ಪರಶುರಾಮದೇವರು ಅವರೆಲ್ಲರ ದುರಾಲೋಚನೆಯನ್ನು ಕಂಡು ಅತಿಯಾದ ಕ್ರೋಧವನ್ನು ತಾಳಿ "ಕದನ್ನ ಭೋಜಿಗಳಾಗಿ, ಶೂದ್ರಪ್ರಾಯರಾಗಿ" ಎಂದು ಶಾಪವಿತ್ತು ಮತ್ತೆ ತಪಸ್ಸಿಗೆ ಹೋದರು. ನಂತರ ಈ ಬ್ರಾಹ್ಮಣರು ಶೂದ್ರರಂಥ ಬಾಳು ಬಾಳತೊಡಗಿದರು.

ಆಗ ರಾಜನಾಗಿದ್ದ ಮಯೂರವರ್ಮನು, ಪರಶುರಾಮ ಕ್ಷೇತ್ರವು ಅಬ್ರಾಹ್ಮಣ್ಯ ಕ್ಷೇತ್ರವಾಗಿದ್ದುದನ್ನು ತಿಳಿದು ಗೋದಾವರಿ ತೀರದಲ್ಲಿ "ಅಹೀಚ್ಛತ್ರ" ಎಂಬ ದೇಶದಲ್ಲಿ ವೇದಾಧ್ಯಯನ ನಿರತರಾಗಿ ಚತು:ಶಾಸ್ತ್ರ ಪಂಡಿತರಾದಂತಹ ಬ್ರಾಹ್ಮಣರಲ್ಲಿ ಉತ್ತಮರಾದವರನ್ನು ಕರೆತಂದು "ಪರಶುರಾಮ ಕ್ಷೇತ್ರ"ದಲ್ಲಿ ಸ್ಥಾಪನೆ ಮಾಡಿದನು.

ಪರಶುರಾಮ ದೇವರು ತಮ್ಮ ಕ್ಷೇತ್ರವನ್ನು ಏಳು ವಿಭಾಗಗಳಾಗಿ ಈ ಕೆಳಗಿನನಂತೆ ಮಾಡಿದ್ದರು:
೧) ಕರಾಟ ವಿಭಾಗ
೨) ವರಾಟ  ವಿಭಾಗ
೩) ಮರಾಟ ವಿಭಾಗ
೪) ಕೊಂಕಟ  ವಿಭಾಗ
೫) ಹೈವ ವಿಭಾಗ
೬) ತೌಳವ ವಿಭಾಗ
೭) ಕೇರಳ ವಿಭಾಗ
- ಮಯೂರವರ್ಮನು ಇವುಗಳಲ್ಲಿ ಹೈವ, ತೌಳವ ಮತ್ತು ಕೇರಳ ವಿಭಾಗಗಳಲ್ಲಿ ಬ್ರಾಹ್ಮಣರನ್ನು ಸ್ಥಾಪಿಸಿದನು. ಹೈವ ದೇಶದಲ್ಲಿ ೧೮ ಗ್ರಾಮಭೇದದಿಂದ, ತೌಳವ ದೇಶದಲ್ಲಿ ೩೨ ಗ್ರಾಮಭೇದದಿಂದ ಹಾಗೂ ಕೇರಳ ದೇಶದಲ್ಲಿ ೬೪ ಗ್ರಾಮಭೇದಗಳಿಂದ ಬ್ರಾಹ್ಮಣರನ್ನು ಸ್ಥಾಪಿಸಿದನು. ಇವರಿಗೆ ದಾನ ನೀಡಿದ ಭೂಮಿ ಇತ್ಯಾದಿಗಳ ಸಂರಕ್ಷಣೆಗಾಗಿ ಅಲ್ಲಿದ್ದ ಶೂದ್ರರನ್ನು ನೇಮಿಸಿ ಬ್ರಾಹ್ಮಣರ ಅಧೀನದಲ್ಲಿರಿಸಿದನು. ಅನೇಕ ಅಗ್ರಹಾರಗಳನ್ನು ಹೊಸದಾಗಿ ನಿರ್ಮಿಸಿ, ಅದನ್ನು ಶಿಷ್ಠರಾದಂತಹ ಬ್ರಾಹ್ಮಣರಿಗೆ "ಪುತ್ರ ಪೌತ್ರ ಸಮೇತರಾಗಿ ಇರಿ" ಎಂದು ಉಚ್ಚರಿಸಿ ಧಾರೆ ಎರೆದು  ಕೊಟ್ಟನು. ಹೈವ ಬ್ರಾಹ್ಮಣರಿಗೆ ೧೮ ಅಗ್ರಹಾರಗಳನ್ನೂ; ಕೋಟ, ಕಂದಾವರ, ಶಿವಳ್ಳಿ ಎಂಬ ತೌಳವ ಬ್ರಾಹ್ಮಣರಿಗೆ ೩೨ ಅಗ್ರಹಾರಗಳನ್ನೂ; ಕೇರಳ ಬ್ರಾಹ್ಮಣರಿಗೆ ೬೪ ಅಗ್ರಹಾರಗಳನ್ನೂ ಧಾರೆ ಎರೆದು  ಕೊಟ್ಟನು.

ಆಗ ಪರಶುರಾಮ ದೇವರಿಂದ ಶಾಪಗ್ರಸ್ಥರಾಗಿ  ಶೂದ್ರರಾದಂತಹ "ನಾಮ ಮಾತ್ರದ ಬ್ರಾಹ್ಮಣರು" ಮಯೂರವರ್ಮನಲ್ಲಿ ಮಾತಿಗೇಳಲು, ಅವರನ್ನು ಸಮಾಧಾನಿಸಲಿಕ್ಕೆಂದು ನಾಗೂರು, ಸ್ವಾಷ್ಟಿಗ್ರಾಮ, ಕುಶಸ್ಥಳ, ಮಟ್ಟಿನ ಗ್ರಾಮ ಎಂದು ನಾಲ್ಕು ಗ್ರಾಮಗಳನ್ನು ಮಾಡಿ ಬ್ರಾಹ್ಮಣರಿಗೂ ಅನುಕೂಲವಾಗುವಂತೆ ಬ್ರಾಹ್ಮಣರ ಅಗ್ರಹಾರದ ನೆರೆಕರೆಯ ಸ್ಥಳಗಳಲ್ಲಿ ಅವರನ್ನು ಸ್ಥಾಪಿಸಿ, ನಾಡವರು ಎಂಬುದಾಗಿ ಪ್ರಖ್ಯಾತಿಸಿ ಸ್ವಸ್ಥಚಿತ್ತನಾಗಿ ಧರ್ಮದಿಂದ ರಾಜ್ಯಪರಿಪಾಲನೆ ಮಾಡುತ್ತಿದ್ದನು. ಹೀಗಿರುವಾಗ ಅವನಿಗೆ ಚಂದ್ರಾ೦ಗದನೆನ್ನುವ ಮಗನು ಹುಟ್ಟಿದನು. ಅವನನ್ನು ಸಣ್ಣವನಾಗಿರುವಾಗಲೇ ಮಂತ್ರಿಯ ಅಧೀನದಲ್ಲಿರಿಸಿ, ಮಯೂರವರ್ಮನು ತಪಸ್ಸಿಗೆಂದು ಹೋದನು. ಆಗ ಹೈವ, ತೌಳವ ಮತ್ತು ಕೇರಳ ದೇಶದಲ್ಲಿದ್ದ ಬ್ರಾಹ್ಮಣರು ತಮ್ಮ ಯೋಗಕ್ಷೇಮವನ್ನು ವಿಚಾರಿಸದೇ  ಇರುವ ಮಂತ್ರಿಯ ಅಧೀನದಲ್ಲಿರುವ ಚಂದ್ರಾ೦ಗದನೂ ಅಂಥವನೇ ಇರಬಹುದೆಂದು ಯೋಚಿಸಿ, ಅಹೀಚ್ಚತ್ರಕ್ಕೆ ಹಿಂದಿರುಗಿದರು. ಆಗ "ತನಗೆ ಅಪಕೀರ್ತಿ ಬಂತಲ್ಲಾ!" ಎಂದು ಹೆದರಿ ತಾನೇ ಹೋಗಿ ಅನೇಕ ವಿಧಗಳಿಂದ ಹೇಳಿ ಚಂದ್ರಾ೦ಗದನು ಅವರ ಮನಸ್ಸನ್ನು ಪಡೆದುಕೊಂಡು ಎಲ್ಲರನ್ನೂ ತನ್ನ ಜೊತೆಗೆ ಕರೆದುಕೊಂಡು ಬಂದು ಆಯಾ ಪ್ರದೇಶದಲ್ಲಿ ಮರು ಸ್ಥಾಪಿಸಿ ರಾಜ್ಯಾಭಾರ ಮಾಡುತ್ತಿದ್ದನು.

ಹೀಗಿರುವಾಗ, ಅವನಿಗೆ ಲೋಕಾದಿತ್ಯನೆಂಬ ಮಗನು ಹುಟ್ಟಿದನು. ಅವನು ಪಿತ್ರಾರಿಷ್ಟದಲ್ಲಿ ಹುಟ್ಟಿದ್ದರಿಂದ ಸ್ವಲ್ಪ ದಿನಗಳಲ್ಲಿಯೇ ಚಂದ್ರಾ೦ಗದನು ದೈವಾಧೀನನಾದನು. ಆಗ ರಾಜ್ಯ ಪರಿಪಾಲನೆ ಮಾಡಲು ಯಾರೂ ಇಲ್ಲದ್ದರಿಂದ "ಹುಬ್ಬಾಸಿಗ" ಎಂಬ ಚಾಂಡಾಲನು ತನ್ನ ಜೊತೆಯವರೊಡನೆ ಸೇರಿ ಆ ಪ್ರದೇಶದ ಜನರಿಗೆ ನಾನಾ ರೀತಿಯ ಉಪದ್ರವಗಳನ್ನು ನೀಡಲು ಪ್ರಾರಂಭಿಸಿದನು. ಆತನ ಉಪದ್ರವವನ್ನು ತಡೆಯಲಾರದೆ, ಬ್ರಾಹ್ಮಣರು ಮತ್ತೆ ಅಹೀಚ್ಚತ್ರಕ್ಕೆ  ಹಿಂದಿರುಗುವಂತಾಯಿತು. ಆಗ ಪರಶುರಾಮನಿಂದ ನಿರ್ಮಿತರಾದ ಶೂದ್ರಪ್ರಾಯರಾದಂತಹ ಬ್ರಾಹ್ಮಣರು, ಹುಬ್ಬಾಸಿಗನ ಜೊತೆ ಸೇರಿ ಅಗ್ರಹಾರದ ಬ್ರಾಹ್ಮಣರ ತೋಟ ಮುಂತಾದುವುಗಳನ್ನು ಅಧೀನ ಮಾಡಿಕೊಂಡರು. ಆ ಸಮಯದಲ್ಲಿ ಅವನ ಉಪದ್ರವವನ್ನು ತಾಳಲಾರದೆ, ಲೋಕಾದಿತ್ಯನ ತಾಯಿ ತನ್ನ ಮಗನನ್ನು ಕರೆದುಕೊಂಡು ಮೇಲದೇಶಕ್ಕೆ ಹೊರಟುಹೋದಳು. ಆಗ ಚಂಡಸೇನನೆಂಬವನು ತನ್ನ ತಂಗಿಯನ್ನು ಲೋಕಾದಿತ್ಯನಿಗೆ ಮದುವೆಮಾಡಿಕೊಡಬೇಕೆಂದುಕೊಂಡು ಗೋಕರ್ಣದೇಶಕ್ಕೆ ಬಂದು ನಿಂತಿರುವಾಗ ಹುಬ್ಬಾಸಿಗನು ಚಂಡಸೇನನಲ್ಲಿ ಅವನ ತಂಗಿಯಾದ "ಕನಕಾವತಿಯನ್ನು ತನಗೇ  ಮದುವೆ  ಮಾಡಿಕೊಡಬೇಕು, ಇಲ್ಲವಾದಲ್ಲಿ ಅವನನ್ನು ಕೊಂದು ಅವನ ತಂಗಿಯನ್ನು ಮದುವೆಯಾಗಿ ಕರೆದುಕೊಂಡು ಬರುತ್ತೇನೆ" ಎಂದು ಹೇಳಿದನು.


ಆಗ ಚಂಡಸೇನನು ಏಕಕಾಲದಲ್ಲಿ ಆ ಚಂಡಾಲರೆಲ್ಲರನ್ನೂ ಮುಗಿಸಬೇಕೆಂದು ಯೋಚಿಸಿ, ಉಪಾಯದಿಂದ ಕಲ್ಯಾಣ ಮಂಟಪವನ್ನು ಯಾವ ದಿಕ್ಕಿನಿಂದಲೂ ಹೊರಗೋಡಲಾಗದ ಹಾಗೆ ಕಟ್ಟಿಸಿ, ಲೋಕಾದಿತ್ಯನಿಗೂ ಅಂತರಂಗದ ಸಂದೇಶ ತಿಳಿಸಿ ಸರ್ವಾನುಕೂಲಗಳನ್ನೂ ಮಾಡಿಸಿದನು. ಮದುವೆಯ ದಿನ ಚಾಂಡಾಲರೆಲ್ಲರೂ ನಿರಾಯುಧರಾಗಿ ಜೊತೆಗೂಡಿ ಬರುವಂತೆ ಹೇಳಿದುದರಿಂದ, ಹೇಳಿದ ದಿನದಂದು ನಿರಾಯುಧರಾಗಿ ಬಂದಂಥ ಚಾಂಡಾಲರನ್ನು ಮುಗಿಸಲು ಚಂಡಸೇನನು ಮೊದಲೇ ಜಾಗೃತನಾಗಿ ತನ್ನ ಕಡೆಯವರಿಂದ ಸನ್ನಿದ್ಧನಾಗಿದ್ದನು. ಆಗ ತನ್ನ ಸೈನ್ಯದೊಂದಿಗೆ ಬಂಡ ಲೋಕಾದಿತ್ಯರಾಯನ ಜೊತೆಸೇರಿ ಚಂಡಸೇನನು ಮೊಟ್ಟಮೊದಲಿಗೆ ಹುಬ್ಬಾಸಿಗನನ್ನು ಸಂಹರಿಸಿ, ಚಾಂಡಾಲ ಜಾತಿಯವರಲ್ಲಿ ಹಲವರನ್ನು ಸಂಹಾರ ಮಾಡಿ ಸ್ವಲ್ಪ ಜನರು ಪಾದಾಕ್ರಾಂತರಾಗುತ್ತಿರಲು, ಅವರನ್ನು, ಚಾಂಡಾಲ ಹೆಂಗಸರು, ಹುಡುಗರು ಹಾಗೂ ಮಕ್ಕಳನ್ನು ವ್ಯವಸಾಯಕ್ಕಾಗಿ ನೇಮಿಸಿ, ಲೋಕಾದಿತ್ಯರಾಯನಿಗೆ ತನ್ನ ತಂಗಿಯನ್ನು ಧಾರೆ ಎರೆದು  ಕೊಟ್ಟನು.

ನಂತರ, ಹಿಂದಿನಂತೆ ರಾಜ್ಯಾಧಿಪತ್ಯವನ್ನು ಲೋಕಾದಿತ್ಯನು ಮಾಡುತ್ತಿರುವಾಗ, ಬ್ರಾಹ್ಮಣರು ಹುಬ್ಬಾಸಿಗನ ಕಿರುಕುಳಗಳಿಗೆ ಹೆದರಿ ಓಡಿಹೋದ ವಿಷಯ ತಿಳಿದು, ಮತ್ತೆ ಅಹೀಚ್ಚತ್ರಕ್ಕೆ ಹೋಗಿ ಬ್ರಾಹ್ಮಣರನ್ನು ಕರೆತರಲು ಸರ್ವಪ್ರಯತ್ನ ಮಾಡಿದನು. ಆಗ ಬ್ರಾಹ್ಮಣರೆಲ್ಲರೂ ಒಕ್ಕೊರಲಿನಿಂದ, "ಇಂದಿನವರೆಗೆ ನಾವು ಅನುಭವಿಸಿದ್ದು ಸಾಕು. ಇನ್ನು ಮೇಲೆ ಆ ದೇಶಕ್ಕೆ ನಾವು ಬರುವವರಲ್ಲ." ಎಂದು ಹೇಳಿದರು. ಆಗ ಭಟ್ಟಾಚಾರ್ಯರು ಹುಬ್ಬಾಸಿಗನನ್ನು ಸಂಹರಿಸಿದ ವಿಷಯವನ್ನು ತಿಳಿಸಿದರು. ನಂತರ ಬ್ರಾಹ್ಮಣರು ಆ ಮಾತಿಗೆ ಒಡಂಬಟ್ಟು ಲೋಕಾದಿತ್ಯನ ಜೊತೆಗೆ ಮತ್ತೆ ತಮ್ಮ ತಮ್ಮ ಅಗ್ರಹಾರಗಳಿಗೆ ಹಿಂದಿರುಗಿದರು. ಲೋಕಾದಿತ್ಯನು ಬ್ರಾಹ್ಮಣರುಗಳಿಗೆ ವ್ಯಜನ, ಪಾದುಕೆ, ಛತ್ರಯಾನ, ಮುಂತಾದ ಬಹುಮಾನಗಳನ್ನು ನೀಡಿ ಸತ್ಕರಿಸಿ ಸಂತೋಷಪಡಿಸಿದನು.

ಯುಧಿಷ್ಠಿರ ಶಕದಲ್ಲಿ, ೧೦೮೯ನೇ ಸರ್ವಜಿತು  ಸಂವತ್ಸರದಲ್ಲಿ ಲೋಕಾದಿತ್ಯನು ಬ್ರಾಹ್ಮಣರನ್ನು ಹೈವ, ತೌಳವ ಮತ್ತು ಕೇರಳವೆಂಬ ಮೂರು ದೇಶಗಳಲ್ಲಿ ಪುನಃ ಸ್ಥಾಪಿಸಿದನು. ಹೀಗೆ, ಎಲ್ಲಾ ಅಗ್ರಹಾರಗಳಲ್ಲೂ ನಿರಂತರ ಪೂಜೆ ಪುನಸ್ಕಾರಗಳು ನಡೆಯುವುದಕ್ಕಾಗಿ ಅಲ್ಲಲ್ಲಿ ಪೂಜಕರನ್ನು ನೇಮಿಸಿ ಕೃತಾರ್ಥನಾದೆನೆಂದು ತಿಳಿದು ತೌಳವ ದೇಶದಲ್ಲಿ ಲೋಕಾದಿತ್ಯನು ವಾಸಿಸುತ್ತಿದ್ದನು. ಈ ತೌಳವ ದೇಶವೇ ಅಧಿಕವಾಗಿ ಧರ್ಮದೇಶವಾದ್ದರಿಂದ ಅದನ್ನು ಪುಣ್ಯದೇಶವೆಂದು ನಂಬಿ ಅಲ್ಲಿ ವಾಸಿಸುತ್ತಿದ್ದನು.

ಅಗ್ರಹಾರದ ಬ್ರಾಹ್ಮಣರೆಲ್ಲರೂ ತಮ್ಮ ಮೂಲಸ್ಥಾನದ ಹೆಸರನ್ನು ತಾವು ಬಂದು ನೆಲೆಸಿದ ಸ್ಥಳಕ್ಕೆ ನಾಮಕರಣ ಮಾಡಿದರು.

ತೌಳವ ದೇಶದಲ್ಲಿದ್ದ ಬ್ರಾಹ್ಮಣರಲ್ಲಿ ಶಿವಳ್ಳಿ, ಕೋಟ, ಹವ್ಯಕ, ಸ್ಥಾನಿಕರು, ಕೋಟೇಶ್ವರರು ಮುಂತಾದ ಒಳಪಂಗಡಗಳು ಇದ್ದವು. ಹಿಂದಿನಿಂದಲೂ, ಈ ಬ್ರಾಹ್ಮಣರಲ್ಲಿ ಶಿವಳ್ಳಿ ಪಂಗಡದವರು ಶ್ರೇಷ್ಠರಾದವರೆಂಬ ನಂಬಿಕೆಯಿತ್ತು. ಈ ಶಿವಳ್ಳಿ ಬ್ರಾಹ್ಮಣರಲ್ಲಿ ಹಲವಾರು (ಸುಮಾರು ೫೦೦ಕ್ಕೂ ಹೆಚ್ಚು) ಕುಲನಾಮಗಳಿರುವುದನ್ನು ಗಮನಿಸಬಹುದು. ಉದಾ: ಕಂಬಾರಣ್ಣಾಯ, ಶಿಬರೂರಾಯ, ಸರಳಾಯ, ಕಲ್ಲೂರಾಯ, ಮೂಡಣ್ಣಾಯ, ನಾರಳೀಕರ್, ನಿಂಬಾಳ್ಕರ್ ಇತ್ಯಾದಿ. ಈ ಕುಲನಾಮಗಳು ಹಲವಾರು ಸ್ಥಳಗಳ ಹೆಸರಿನಿಂದಲೋ , ವೃಕ್ಷಗಳ ಹೆಸರಿನಿಂದಲೋ ಅಥವಾ ಯಾವುದಾದರೂ ಹಣ್ಣು ಹಂಪಲು ಇತ್ಯಾದಿಗಳಿಂದಲೋ  ಅಥವಾ ಅವರವರ ಕಸುಬಿನ ಹೆಸರಿನಿಂದಲೋ  ಬಂದುದಾಗಿದೆ. ಉದಾ: ನಾರಳಿಕರ್ ಅಂದರೆ ನಾರಳಿ (ತೆಂಗಿನಕಾಯಿ) ಯಿಂದ ಬಂದುದಾಗಿದೆ. ಹಾಗೆಯೇ, ಕಲ್ಲೂರಾಯ ಎಂಬುದು "ಕಲ್ಲೂರು" ಎಂಬ ಸ್ಥಳದಿಂದ ಬಂದುದಾಗಿದೆ.

ಹೀಗೆ, ಬ್ರಾಹ್ಮಣರಲ್ಲಿ ಹಲವಾರು ಒಳಪಂಗಡಗಳಿದ್ದು ಇಂದಿಗೂ ಶಿವಳ್ಳಿ ಬ್ರಾಹ್ಮಣರನ್ನು ಶ್ರೇಷ್ಠ ಪಂಗಡವೆಂದು ಕರೆಯುವುದು ವಾಡಿಕೆಯಾಗಿದೆ. ಈ ಎಲ್ಲಾ ಪಂಗಡಗಳಲ್ಲೂ ಹಲವಾರು ವ್ಯತ್ಯಾಸಗಳಿದ್ದು ಒಬ್ಬೊಬ್ಬರ ಆಚರಣೆ ಇನ್ನೊಬ್ಬರದ್ದಕ್ಕಿಂತ ಭಿನ್ನವಾಗಿದೆ. ಒಂದೊಂದು ಪಂಗಡದವರು ಒಂದೊಂದು ರೀತಿಯಲ್ಲಿ ಸಾಂಸ್ಕೃತಿಕ ಆಚರಣೆಗಳನ್ನು ವಿಧಿ ವಿಧಾನಗಳನ್ನು ಆಚರಿಸುತ್ತಾರೆ.

(ಮುಂದೆ ಓದಿ)


ಶಿವಳ್ಳಿ ಬ್ರಾಹ್ಮಣರು - ಒಂದು ಇತಿಹಾಸ ( ಭಾಗ - 1)

ಯುಗಯುಗಾಂತರಗಳಿಂದಲೂ ಮಾನವರು ನಂಬಿಕೊಂಡು ಬಂದ  ಪ್ರಕಾರ, ಪ್ರತಿಯೊಬ್ಬರಿಗೂ ಏಳು ಜನ್ಮಗಳಿವೆ. ಎಲ್ಲಾ ಜನ್ಮಗಳಿಗಿಂತಲೂ ಮಾನವ ಜನ್ಮ ಶ್ರೇಷ್ಠವಾದುದು. ಬ್ರಹ್ಮಸೃಷ್ಟಿಯಲ್ಲಿ ಜನಿಸಿ  ಜಗತ್ತಿನಲ್ಲಿ ಬದುಕುವ ಎಲ್ಲಾ ಪ್ರಾಣಿವರ್ಗದ ಎಲ್ಲಾ ಜೀವಜಂತುಗಳಲ್ಲಿ ಮಾನವನು ಶ್ರೇಷ್ಠನಾದವನು. ಅಂಥ  ಮಾನವರಲ್ಲಿ ಬ್ರಾಹ್ಮಣ  ಜನ್ಮವನ್ನು ಅತಿ ಶ್ರೇಷ್ಠವಾದುದೆಂದು ನಂಬಲಾಗಿದೆ.


"ಜನ್ಮನಾ ಜಾಯತೇ ಜಂತುಃ" - ಹುಟ್ಟಿದಾಗ ಪ್ರಾಣಿಗಳಂತೆ ಕೇವಲ ಜಂತುವಾಗಿ ಹುಟ್ಟುವ ಮನುಷ್ಯನು ಸಂಸ್ಕಾರಗಳಿಂದ ಬ್ರಾಹ್ಮಣನಾಗಿ ಉತ್ಕ್ರಾಂತನಾಗುತ್ತಾನೆಂದು ಮಹಾತಪಸ್ವಿಗಳಾದ ಋಷಿಮುನಿಗಳೇ ಬರೆದಿಟ್ಟಿರುತ್ತಾರೆ.  ಇದರ ಪ್ರಕಾರ "ಬ್ರಾಹ್ಮಣ್ಯ" ಎಂದರೇನು? - ಬ್ರಾಹ್ಮಣ್ಯ ಎಂದರೆ "ಮಹಾ ತೇಜಸ್ಸಿನ ಸಂಪತ್ತು." ಎಂದು ತಾತ್ಪರ್ಯವಾಗಿ ಹೇಳಬಹುದು. "ಬ್ರಹ್ಮ" ಅರ್ಥಾತ್ ಪರಮಾತ್ಮ ಶಕ್ತಿಯನ್ನು ವೇದಾದಿಶಾಸ್ತ್ರಾನುಸಾರಿಯಾದ ಕರ್ಮಾನುಷ್ಠಾನದ ಮೂಲಕ ಬಾಳಿನಲ್ಲಿ ವಿಶೇಷವಾಗಿ ಅಭಿವ್ಯಕ್ತಗೊಳಿಸಿ ಬ್ರಹ್ಮತೇಜೋವಂತರಾಗಿ ಬಾಳುವವರು ಬ್ರಾಹ್ಮಣರು. ಯಾವನು ಬ್ರಹ್ಮಜ್ಞಾನಿಯೋ, ಉತ್ತಮ ಮೇಧಸ್ಸನ್ನು ಹೊಂದಿರುತ್ತಾನೋ,  ಸಾತ್ವಿಕನೂ ಸತ್ಯಸಂಧನೂ ಆಗಿರುವನೋ ಅಂಥವನು ಬ್ರಹ್ಮತೇಜಸ್ಸನ್ನು ಪಡೆದು ಬ್ರಾಹ್ಮಣನೆಂದೆನಿಸಿಕೊಳ್ಳುತ್ತಾನೆ.



ಬ್ರಾಹ್ಮಣನಾದವನು ಸಾತ್ವಿಕ ಗುಣಗಳನ್ನು ಹೊಂದಿರುತ್ತಾನೆ ಹಾಗೂ ಸಮಾನಚಿತ್ತತೆಯನ್ನು ಪಡೆದಿರುತ್ತಾನೆ. ಅವನು ಸಾತ್ವಿಕವಾದ ಆಚಾರ, ಸಾತ್ವಿಕವಾದ ವಿಚಾರ, ಸಾತ್ವಿಕ ಆಹಾರ, ಸಾತ್ವಿಕ ಚಿಂತನೆ, ಸಾತ್ವಿಕ ನಡೆ-ನುಡಿಗಳನ್ನು ಹೊಂದಿರುತ್ತಾನೆನ್ನುವುದು ನೀತಿ. ಅವನು ಎಲ್ಲರನ್ನೂ  ಚಿತ್ತತೆಯಿಂದ, ಸಮಾನ ದೃಷ್ಟಿಯಿಂದ ನೋಡುತ್ತಾನೆ. ಸಮತಾಭಾವವನ್ನು ಹೊಂದಿರುವ ಬ್ರಾಹ್ಮಣನು ಎಲ್ಲರೊಂದಿಗೂ ಪ್ರೀತಿಯಿಂದ ಬೆರೆತು ಇತರರಿಂದಲೂ ಅಂಥದ್ದೇ ಪ್ರೀತಿಯನ್ನು ಬಯಸುತ್ತಾನೆ. ಮಾತ್ರವಲ್ಲದೆ, ಬ್ರಾಹ್ಮಣನು ಇತರ ಎಲ್ಲಾ ಜೀವ-ಜಂತುಗಳನ್ನು, ಇತರ ಎಲ್ಲಾ ಜಾತಿಗಳನ್ನೂ ಗೌರವಿಸುತ್ತಾನೆ. ಪ್ರತಿಯೊಂದು ಜೀವಜಂತುಗಳಲ್ಲೂ, ವಸ್ತುಗಳಲ್ಲೂ ಪರಮಾತ್ಮನ ಅಸ್ತಿತ್ವವನ್ನು ಕಾಣುತ್ತಾನೆ. ಹೀಗೆ ಬ್ರಾಹ್ಮಣರು ಸಾತ್ವಿಕವಾದ ಗುಣನಡತೆಗಳನ್ನು ಹೊಂದಿರುತ್ತಾರೆ ಎನ್ನುವುದು ಭಗವಂತನ ವಾಚ್ಯ.

ಬ್ರಾಹ್ಮಣನ ಗುಣಧರ್ಮಗಳು ಅವನ ಹುಟ್ಟಿನ ನಂತರ ಯಥೋಚಿತವಾದ ಸಂಸ್ಕಾರಗಳ ಫಲದಿಂದ ಅರಳಿ ಬೆಳಗುತ್ತವೆ . ಹಾಗಾಗಿ ಮೂಲತಃ ಬ್ರಾಹ್ಮಣನಲ್ಲಿ ಆ ಗುಣಗಳು ಹುಟ್ಟಿನಿಂದಲೇ ಬೀಜರೂಪವಾಗಿ ಇರುತ್ತದೆನ್ನುವುದರಲ್ಲಿ ಸಂದೇಹವೇ ಇಲ್ಲ. ಆದುದರಿಂದ, ಬ್ರಾಹ್ಮಣನು ಹುಟ್ಟಿನಿಂದಲೇ ಬ್ರಾಹ್ಮಣನಾಗಿದ್ದರೂ ಕೂಡಾ ಗುಣಯೋಗ್ಯತೆಗಳು ಅವನಲ್ಲಿ ಇನ್ನೂ ಅರಳದೆ ಸುಪ್ತವಾಗಿರುತ್ತದೆ. ಮುಂದೆ ಶಾಸ್ತ್ರೋಕ್ತವಾಗಿ, ಅಗ್ನಿಸಾಕ್ಷಿಯಾಗಿ ನಡೆಸುವ ಉಪನಯನಾದಿ ಸಂಸ್ಕಾರಗಳಿಂದ ದ್ವಿಜನಾಗಿ (ಅಂದರೆ ದ್ವಿತೀಯ ಜನ್ಮ ಪಡೆದವನಂತೆ) ರೂಪಿತಗೊಂಡು, ಸಂಧ್ಯಾವಂದನೆ, ಉಪಾಸನೆ, ಸದಾಚಾರ, ಸತ್ಕರ್ಮಗಳ ಫಲದಿಂದ ಬ್ರಹ್ಮತೇಜಸ್ಸನ್ನು ಪಡೆದು, ಬ್ರಾಹ್ಮಣನಾಗಿ ಬೆಳಗುತ್ತಾನೆ, ಬೆಳೆಯುತ್ತಾನೆ.

"ದ್ರಾವಿಡ ಬ್ರಾಹ್ಮಣರು" ಎಂದು ಕರೆಯಲ್ಪಡುವವರು ಈಗಿನ ಗೋಕರ್ಣದಿಂದ ಹಿಡಿದು ಕಾಸರಗೋಡಿನವರೆಗೆ ಚಾಚಿದ ಕರಾವಳಿ ಪ್ರದೇಶದ ಬ್ರಾಹ್ಮಣರು. ಇವರಲ್ಲಿ ಮುಖ್ಯವಾಗಿ ಕಾಣಲ್ಪಡುವ ಒಳಪಂಗಡದವರು ಎಂದರೆ ಹವ್ಯಕರು, ಶಿವಳ್ಳಿ, ಕೋಟ, ಕೋಟೇಶ್ವರ, ಸ್ಥಾನಿಕ ಮುಂತಾದವರು.  ಹಿಂದಿನಿಂದಲೂ ಬ್ರಾಹ್ಮಣರ ಒಳಪಂಗಡದಲ್ಲಿ ಶಿವಳ್ಳಿ ಬ್ರಾಹ್ಮಣರ ಪಂಗಡವು ಶ್ರೇಷ್ಠವಾದುದೆಂದು ತಿಳಿಯುತ್ತಿದ್ದರು. ಆದರೆ, ಈ ಬ್ರಾಹ್ಮಣರು ಯಾರು?? ಎಲ್ಲಿಂದ ಬಂದವರು???

(ಮುಂದೆ ಓದಿ)

ಮುನ್ನುಡಿ


।। ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ ।
ತಮೋsರಿಮ್ ಸರ್ವಪಾಪಘ್ನಮ್ ಪ್ರಣತೋsಸ್ಮಿ ದಿವಾಕರಂ ।।


"ಜಪಾಕುಸುಮ ಅಂದರೆ ದಾಸವಾಳದ ಹೂವಿನಂತೆ ಕೆಂಪಗಿನ ಬಣ್ಣ ಹೊಂದಿರುವ ಕಾಶ್ಯಪ ಮಹರ್ಷಿಯ ಸುತನಾದ, ಅತೀವವಾದ ಪ್ರಕಾಶವುಳ್ಳ, ಅಂಧಕಾರದ ಶತ್ರುವಾದ, ಸರ್ವ ಪಾಪಗಳನ್ನು ನಶಿಸುವ ಶಕ್ತಿಯುಳ್ಳ ಸೂರ್ಯದೇವನಿಗೆ ಮನಃ ಪೂರ್ವಕವಾಗಿ ಭಕ್ತಿಯಿಂದ ನಮಿಸುತ್ತೇನೆ" ಎಂದು ಹೇಳುತ್ತಾ ದಿನವನ್ನು ಪ್ರಾರಂಭಿಸುವ ಜನ ನಾವು ಶಿವಳ್ಳಿ ಬ್ರಾಹ್ಮಣರು.

"ಶಕ್ತಿಗಿಂತಲೂ  ಯುಕ್ತಿ ಮೇಲು" - ಈ  ನುಡಿಯ  ಪ್ರಕಾರ ಶಕ್ತಿ ಅಥವಾ ಶರೀರದ ಬಲಕ್ಕಿಂತಲೂ ಮಿಗಿಲಾದುದು ಯುಕ್ತಿ ಅಥವಾ ಮನಸ್ಸಿನ ಬಲ, ಚಿಂತನಾಶೀಲತೆ. ಈ ಚಿಂತನಾಶೀಲತೆ ಅಥವಾ ಯುಕ್ತಿಯ ವೃದ್ಧಿಯಾಗಬೇಕಾದರೆ ಮನುಷ್ಯನಿಗೆ  ಸಂಸ್ಕಾರ ಅತ್ಯಗತ್ಯ. ಸಂಸ್ಕಾರವಿದ್ದಾಗ ಮನಸ್ಸು ಸ್ಥಿಮಿತದಲ್ಲಿದ್ದು ಜ್ಞಾನಾಭಿವೃದ್ಧಿಗೆ ಎಡೆ  ಮಾಡಿಕೊಡಬಹುದು.

"ಸಾಮಾನ್ಯ ರೂಪದಲಿ, ಸಂಸಾರಿ ವೇಷದಲಿ ।
ಸ್ವಾಮಿ ನಿನ್ನೆಡೆಗೆ ಬರಬಹುದು ವರ  ನೀಡಿ ।।
ಮೈಮೆ ಕಾಂಬೊಡೆ ನಿನಗೆ ಸಂಸ್ಕಾರವಿರಬೇಕು ।
ತಾಮಸಿಗೆ ವರವೆಲ್ಲಿ? -  ಮಂಕುತಿಮ್ಮ ।।"

- ಡಿ. ವಿ. ಜಿ ಯವರ "ಮಂಕುತಿಮ್ಮನ ಕಗ್ಗ"ದ  ಪ್ರಕಾರ ದೇವರು ನಮ್ಮೆಡೆಗೆ ಸಾಮಾನ್ಯ ರೂಪದಲ್ಲಿಯೋ, ಸಂಸಾರಿಯ ವೇಷ ಧರಿಸಿಯೋ ಬರಬಹುದು. ಆ ದೇವರನ್ನು ಗುರುತಿಸಬೇಕಾದರೆ ನಮಗೆ ಸಂಸ್ಕಾರವಿರಬೇಕು. ತಾಮಸಗುಣದವರಿಗೆ ಆತ ದೊರಕಲಾರನು. ಹಾಗಾದರೆ, ನಮಗೆ ಸಂಸ್ಕಾರವೆಂಬುದು ಇರಲೇಬೇಕು. ಈ ಸಂಸ್ಕಾರವು ಪ್ರತಿಯೊಬ್ಬನಿಗೂ ತನ್ನ ಕುಟುಂಬದ ಆಚಾರ-ವಿಚಾರಗಳಿಂದಾಗಿ ಬರುತ್ತದೆ.

ಶಿವಳ್ಳಿ ಬ್ರಾಹ್ಮಣರ ಸಂಸ್ಕಾರವು ವಿಧೇಯ ಸಂಸ್ಕಾರಗಳಾಗಿದ್ದು ಪ್ರೀತಿ -ವಿಶ್ವಾಸಗಳಿಂದ ಕೂಡಿದುದಾಗಿದ್ದು ಜಗತ್ತಿನಲ್ಲಿಯೇ ಶ್ರೇಷ್ಠ ಸಂಸ್ಕಾರವೆಂದು ಪರಿಗಣಿಸಲ್ಪಟ್ಟಿದೆ. ಈ ಬ್ರಾಹ್ಮಣರ ಸಂಸ್ಕಾರಗಳ ಕಿರುಪರಿಚಯವನ್ನು ಈ ಆಧ್ಯಯನಿಕ ಕಿರುಪ್ರಬಂಧದ ಮೂಲಕ ನಮ್ಮ ಸುತ್ತಲಿನ ಆಚರಣೆಗಳ ಅಧ್ಯಯನ ಪ್ರಬಂಧವಾಗಿ ತಮ್ಮೆಲ್ಲರಿಗೂ ಓದಲು ಈ ಬ್ಲಾಗ್ ಮೂಲಕ ಅಭಿವ್ಯಕ್ತ ಪಡಿಸಲು ಸಂತೋಷಪಡುತ್ತೇನೆ. ಇದಕ್ಕಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಯಾವುದೇ ಕಾರ್ಯವನ್ನು ಮಾಡಲು ಗುರುಹಿರಿಯರ ಆಶೀರ್ವಾದ ಅತ್ಯಗತ್ಯ.  ದೈವಾನುಗ್ರಹ ಗುರುಹಿರಿಯರ ಆಶೀರ್ವಾದ ಹಾಗೂ ಇವುಗಳಿಂದಾಗಿ ನನ್ನಲ್ಲಿ ಬೆಳೆದಿರುವ ಸಾಹಿತ್ಯದಲ್ಲಿನ ಆಸಕ್ತಿ ನನಗೆ ಈ ಲೇಖನಗಳನ್ನು ಬರೆಯಲು ಪ್ರಚೋದಿಸಿತು. ಇದಕ್ಕೆ ತಮ್ಮ ವಿದ್ವತ್ತಿನ ಬಿಂದುಗಳನ್ನು ನನಗೆ ನೀಡಿದ್ದ ಈಗ ದಿವಂಗತರಾಗಿರುವ ನನ್ನ ಅಜ್ಜ ವೇದಮೂರ್ತಿ ಶ್ರೀ ರಾಮ ತಂತ್ರಿಗಳಿಗೆ ನಾನು ಹೃತ್ಪೂರ್ವಕವಾಗಿ ವಂದಿಸುತ್ತಾ ಅವರ ಆಶೀರ್ವಾದಗಳೊಂದಿಗೆ ಈಗ ಈ ಬ್ಲಾಗ್ ಮೂಲಕ ನನ್ನ ಲೇಖನವನ್ನು ನಿಮ್ಮೆಲ್ಲರ ಆರ್ಜನೆಗೆ ಬಿಟ್ಟುಕೊಡುತ್ತಿದ್ದೇನೆ. ಈ ಲೇಖನ ಬರೆಯಲು ಸ್ಪೂರ್ತಿ ನೀಡಿ ತಮ್ಮ ಜ್ಞಾನದ ತುಣುಕುಗಳನ್ನು ನನಗೆ ನೀಡಿದ ನನ್ನ ಸೋದರಮಾವ ವೇದಮೂರ್ತಿ ಶ್ರೀ ರಾಧಾಕೃಷ್ಣ ತಂತ್ರಿಗಳು, ಮಾತಾಪಿತೃಗಳಾದ ಶ್ರೀ ಪೆದಮಲೆ  ವೇದವ್ಯಾಸ ಭಟ್ ಹಾಗೂ ಶ್ರೀಮತಿ ಹೀರಾ ಹಾಗೂ ಬಂಧುವಾದ ಶ್ರೀ ಏನ್ ರವೀಶ್ ಮೂಡಿತ್ತಾಯ ಇವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಓದುಗರೆಲ್ಲರಿಗೂ ಈ ಕೃತಿಯು ಜ್ಞಾನವನ್ನಿತ್ತು "ಶಿವಳ್ಳಿ ಬ್ರಾಹ್ಮಣರ ಸಂಸ್ಕೃತಿ"ಯ ಪರಿಚಯ ತಿಳಿಯಲಿ ಎಂದು ಆಶಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

ತಮ್ಮ ವಿಶ್ವಾಸಿ,
ದೀಪಲಕ್ಷ್ಮಿ ಭಟ್.


(ವಿ.ಸೂ. ಈ ಕೃತಿಯನ್ನು ಸುಮಾರು ೧೫ ವರ್ಷಗಳ ಹಿಂದೆ  ರಚಿಸಲಾಗಿದೆ.. )

Featured post

ಷೋಡಶ ಸಂಸ್ಕಾರ (೮) - ಅನ್ನಪ್ರಾಶನ

ಹುಟ್ಟಿದ ಆರು ಅಥವಾ ಎಂಟನೇ ತಿಂಗಳಿನಲ್ಲಿ ಮಗುವಿಗೆ ಅನ್ನಪ್ರಾಶನ ಮಾಡಿಸಬೇಕು. ಸಮಸಂಖ್ಯೆಯ ತಿಂಗಳು ಯುಕ್ತವೆನ್ನುತ್ತಾರೆ. ಕಶ್ಮಲವನ್ನು ತಿಂದಿದ್ದ ಮಗುವಿನ ಶುದ್ಧಿಗಾಗಿ, ...

Popular Posts

Search This Blog